ADVERTISEMENT

ಕೊನೆಗೆ `ತೆನೆಹೊತ್ತ' ರಕ್ಷಿತಾ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST
ಕೊನೆಗೆ `ತೆನೆಹೊತ್ತ' ರಕ್ಷಿತಾ
ಕೊನೆಗೆ `ತೆನೆಹೊತ್ತ' ರಕ್ಷಿತಾ   

ಬೆಂಗಳೂರು: ಚಿತ್ರನಟಿ ರಕ್ಷಿತಾ ಅವರು ಸೋಮವಾರ ಬಿಎಸ್‌ಆರ್ ಕಾಂಗ್ರೆಸ್‌ಗೆ ವಿದಾಯ ಹೇಳಿ, ಅಧಿಕೃತವಾಗಿ ಜೆಡಿಎಸ್ ಸೇರಿದರು.ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ ರಕ್ಷಿತಾ, ಅವರ ಸಮ್ಮುಖದಲ್ಲೇ ಪಕ್ಷ ಸೇರಿದರು.

`ಬಿಎಸ್‌ಆರ್ ಕಾಂಗ್ರೆಸ್‌ನಲ್ಲಿ ಉಸಿರುಗಟ್ಟುವ ವಾತಾವರಣ ಇತ್ತು. ಅಲ್ಲಿನ ವ್ಯವಸ್ಥೆ ಸರಿ ಇರಲಿಲ್ಲ. ನನ್ನ ಬೆಂಬಲಿಗರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಇದರಿಂದ ಬಹಳ ಹಿಂದೆಯೇ ಬೇಸರವಾಗಿತು. ಎಲ್ಲವೂ ಸರಿಹೋಗಬಹುದು ಎಂದು ಸ್ವಲ್ಪ ದಿನ ಕಾದೆ. ಆದರೆ, ಯಾವುದೇ ಬದಲಾವಣೆ ಕಂಡುಬರಲಿಲ್ಲ. ಅನಿವಾರ್ಯವಾಗಿ ಪಕ್ಷ ಬಿಡಬೇಕಾಯಿತು' ಎಂದು ರಕ್ಷಿತಾ `ಪ್ರಜಾವಾಣಿ'ಗೆ ತಿಳಿಸಿದರು.

`ಜೆಡಿಎಸ್ ನಿಜವಾದ ಜಾತ್ಯತೀತ ಪಕ್ಷ. ಹಿರಿಯರ ಸಲಹೆ ಪಡೆದು ಆ ಪಕ್ಷ ಸೇರುವ ಮೂಲಕ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದೇನೆ. ಸದ್ಯಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಯೋಚನೆ ಮಾಡಿಲ್ಲ' ಎಂದರು.

ಬಿಎಸ್‌ಆರ್ ಕಾಂಗ್ರೆಸ್‌ನ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದ ರಕ್ಷಿತಾ ಅವರಿಗೆ ಗದಗ ಕ್ಷೇತ್ರದಿಂದ ಟಿಕೆಟ್ ನೀಡುವುದಾಗಿ ಪಕ್ಷದ ಸಂಸ್ಥಾಪಕ ಬಿ.ಶ್ರೀರಾಮುಲು ಅವರು ಮೊದಲಿನಿಂದಲೂ ಹೇಳಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಗದಗ ಬದಲು ಚಾಮರಾಜನಗರದಿಂದ ಟಿಕೆಟ್ ನೀಡಲಾಯಿತು. ಅಲ್ಲಿ ಚುನಾವಣಾ ಪ್ರಚಾರ ಕೂಡ ಆರಂಭಿಸಿದ್ದ ಅವರು ದಿಢೀರ್ ತಮ್ಮ ನಿರ್ಧಾರ ಬದಲಿಸಿ, ಜೆಡಿಎಸ್‌ಗೆ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.