ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಉತ್ತಮ ಖಾತೆಗಳ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ನ ಹಿರಿಯ ಶಾಸಕರಿಗೆ ಖಾತೆ ಹಂಚಿಕೆ ಪಟ್ಟಿ ಬಿಡುಗಡೆಗೊಂಡ ಬಳಿಕ ತೀವ್ರ ನಿರಾಸೆಯಾಗಿದೆ.
ಆರ್.ವಿ.ದೇಶಪಾಂಡೆ ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲ ಬೃಹತ್ ಕೈಗಾರಿಕೆ ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರು ಅದೇ ಖಾತೆ ಬಯಸಿದ್ದರು. ಆದರೆ, ಅವರಿಗೆ ಕಂದಾಯ ಇಲಾಖೆ ನೀಡಲಾಗಿದೆ.
ಇಂಧನ ಅಥವಾ ಲೋಕೋಪಯೋಗಿ ಖಾತೆ ಮೇಲೆ ಕಣ್ಣಿಟ್ಟಿದ್ದ ಜೆಡಿಎಸ್ನ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಅವರಿಗೆ ಉನ್ನತ ಶಿಕ್ಷಣ ಖಾತೆ ನೀಡಲಾಗಿದೆ. ಖಾತೆ ಬಗ್ಗೆ ಜಿ.ಟಿ.ದೇವೇಗೌಡ ಅಸಮಾಧಾನಗೊಂಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಜೆಡಿಎಸ್ನಲ್ಲಿ ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ನಿಷ್ಠರಿಗೆ ಮಹತ್ವದ ಖಾತೆಗಳು ಸಿಕ್ಕಿವೆ. ಬಂಡೆಪ್ಪ ಕಾಶೆಂಪೂರ ಅವರಿಗೆ ಸಹಕಾರ, ಡಿ.ಸಿ.ತಮ್ಮಣ್ಣ ಅವರಿಗೆ ಸಾರಿಗೆ, ಸಾ.ರಾ.ಮಹೇಶ್ಗೆ ಪ್ರವಾಸೋದ್ಯಮ, ರೇಷ್ಮೆ, ತೋಟಗಾರಿಕೆ ನೀಡಲಾಗಿದೆ ಎಂಬ ಅತೃಪ್ತಿ ಹೊಗೆಯಾಡುತ್ತಿದೆ.
ಇಂಧನ ಖಾತೆಗಾಗಿ ಪಟ್ಟು ಹಿಡಿದಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಖಾತೆಗಳನ್ನು ನೀಡುವ ಮೂಲಕ ಸಮಾಧಾನಗೊಳಿಸುವ ಪ್ರಯತ್ನ ನಡೆಸಲಾಗಿದೆ.
*
ಪುಟ್ಟರಾಜು ಅತೃಪ್ತಿ ಬಹಿರಂಗ:
ಮಹತ್ವದ ಖಾತೆಯ ನಿರೀಕ್ಷೆಯಲ್ಲಿದ್ದ ಜೆಡಿಎಸ್ನ ಸಿ.ಎಸ್.ಪುಟ್ಟರಾಜು ಅವರಿಗೆ ಸಣ್ಣ ನೀರಾವರಿ ಖಾತೆ ನೀಡಲಾಗಿದೆ. ಇದರಿಂದ ಅಸಮಧಾನಗೊಂಡಿರುವ ಅವರು ಶನಿವಾರ ಮಾಧ್ಯಮಗೋಷ್ಠಿ ನಡೆಸಿ ತಮ್ಮ ಅಭಿಪ್ರಾಯ ಬಹಿರಂಗಪಡಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.