ADVERTISEMENT

ಖಾಸಗಿ ಕಂಪೆನಿಗೆ ನೆರವು ನೀಡಿದ ವ್ಯಕ್ತಿ ರಕ್ಷಣೆಗೆ ಮುಂದಾದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 17:45 IST
Last Updated 16 ಫೆಬ್ರುವರಿ 2011, 17:45 IST

ಬೆಂಗಳೂರು: ಸರ್ಕಾರಕ್ಕೆ ಬಾಕಿ ನೀಡಬೇಕಿದ್ದ ಖಾಸಗಿ ಕಂಪೆನಿಯೊಂದಕ್ಕೆ ನೆರವು ನೀಡಿದ ಅಧಿಕಾರಿಯೊಬ್ಬರನ್ನು ಸರ್ಕಾರವೇ ರಕ್ಷಿಸಲು ಮುಂದಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣ ಅರಣ್ಯ ವಲಯದಲ್ಲಿ ಪವನ ವಿದ್ಯುತ್ ತಯಾರಿಕೆಗೆ ಖಾಸಗಿ ಕಂಪೆನಿಯೊಂದು 2006ರ ಜನವರಿ 25ರಂದು ಅನುಮತಿ ಪಡೆದಿದ್ದು, ಆ ಪ್ರಕಾರ ಹನುಮಂತನಹಳ್ಳಿ ಅರಣ್ಯದಲ್ಲಿ 24 ಗಾಳಿಯಂತ್ರಗಳನ್ನು ಅಳವಡಿಸಿತ್ತು. ಆ ಸಂಸ್ಥೆ ಯಂತ್ರ ಸ್ಥಾಪನೆಗೆ ಮರಗಳನ್ನು ಕಡಿದಿದ್ದು ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಪಡೆಯಲು ಸರ್ಕಾರಕ್ಕೆ ಪಾವತಿಸಬೇಕಿದ್ದ ರೂ 10.20 ಲಕ್ಷ ಬಾಕಿ ಉಳಿಸಿಕೊಂಡಿದ್ದು, ಇದಕ್ಕೆ ಮಹಾಲೇಖಪಾಲರು ವರದಿಯಲ್ಲಿ ಆಕ್ಷೇಪಿಸಿದ್ದಾರೆ.
ಹಣ ಬಾಕಿ ಇರುವ ಸಂದರ್ಭದಲ್ಲೇ ಕಂಪೆನಿಯು ಅರಣ್ಯ ಇಲಾಖೆಯ ಅನುಮತಿ ಇಲ್ಲದೆ 24 ಗಾಳಿಯಂತ್ರಗಳ ಪೈಕಿ 16 ಯಂತ್ರಗಳನ್ನು ಸ್ಥಳಾಂತರಿಸಿದೆ. ಇದನ್ನು ಗಮನಿಸಿದರೂ ತಡೆಯೊಡ್ಡದೆ ಅಥವಾ ಕಂಪೆನಿ ವಿರುದ್ಧ ಮೇಲಾಧಿಕಾರಿಗೆ ದೂರು ನೀಡದೆ ಕರ್ತವ್ಯಲೋಪ ಎಸಗಿರುವ ಆರೋಪವನ್ನು ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಶಿವಣ್ಣ ಎದುರಿಸುತ್ತಿದ್ದಾರೆ.

ತಿಪಟೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಈ ಬಗ್ಗೆ ತನಿಖೆ ನಡೆಸಿದ್ದು ಸರ್ಕಾರಕ್ಕೆ ಹಣ ನೀಡಬೇಕಿದ್ದ ಕಂಪೆನಿ ಗಾಳಿಯಂತ್ರಗಳನ್ನು ಸ್ಥಳಾಂತರಿಸುವುದನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು 2010ರ ಸೆ.27ರಂದು ತುಮಕೂರು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ವರದಿ ನೀಡಿದ್ದಾರೆ.

ಇದಾದ ನಂತರ ಕರ್ತವ್ಯ ಲೋಪ ಎಸಗಿರುವ ಅಧಿಕಾರಿ ವಿರುದ್ಧ ನಡೆಸಿರುವ ವಿಚಾರಣಾ ವರದಿ ಮತ್ತು ಅದಕ್ಕೆ ಅಧಿಕಾರಿ ನೀಡಿರುವ ಸಮಜಾಯಿಷಿಯನ್ನು ಕೊಟ್ಟು ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ತುಮಕೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಸನ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ. ಆದರೆ ಇದುವರೆಗೆ ಯಾವುದೇ ಕ್ರಮಕೈಗೊಳ್ಳದಿರುವುದು ಇಲಾಖೆ ವಲಯದಲ್ಲಿ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.