ಹುಬ್ಬಳ್ಳಿ: ‘ಪಾಕಿಸ್ತಾನ ನೋಡಬೇಕೆಂದರೆ, ಅಲ್ಲಿಗೇ ಹೋಗುವ ಅವಶ್ಯಕತೆ ಇಲ್ಲ. ಈ ಗಣೇಶಪೇಟೆ ನನಗೆ ಪಾಕಿಸ್ತಾನದಂತೆಯೇ ಕಾಣುತ್ತಿದೆ. ಇಲ್ಲಿಯೇ ಪಾಕಿಸ್ತಾನ ನಿರ್ಮಾಣವಾಗಿದೆ’ ಎಂದು ಗಣೇಶಪೇಟೆ ದೊಡ್ಡ ಮಸೀದಿಯ ಮುತುವಲ್ಲಿ ಅಬ್ದುಲ್ ಹಮೀದ್ ಖೈರಾತಿ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಗರದ ಗಣೇಶಪೇಟೆಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ‘ನಾವು ಒಗ್ಗಟ್ಟಿನಿಂದ ಎದೆ ಸೆಟೆಸಿ ನಿಂತರೆ ಯಾರೂ ನಮ್ಮ ತಂಟೆಗೆ ಬರುವುದಿಲ್ಲ’ ಎಂದೂ ಹೇಳಿದ್ದಾರೆ.
ಹುಬ್ಬಳ್ಳಿ ಉತ್ತರ ಎಸಿಪಿ ದಾವೂದ್ಖಾನ್ ಹಾಗೂ ಶಹರ ಠಾಣೆ ಇನ್ಸ್ಪೆಕ್ಟರ್ ಶಿವಾನಂದ ಚಲವಾದಿ ಅವರು ಈ ಸಂದರ್ಭದಲ್ಲಿ ವೇದಿಕೆ ಮೇಲೆ ಇದ್ದರು.
‘ಮುತುವಲ್ಲಿ ಖೈರಾತಿ ನೀಡಿದ ಹೇಳಿಕೆ ನನ್ನ ಗಮನಕ್ಕೆ ಬಂದಿಲ್ಲ. ನಾನು ಇನ್ಸ್ಪೆಕ್ಟರ್ ಜೊತೆ ಮಾತುಕತೆಯಲ್ಲಿ ತೊಡಗಿದ್ದ ವೇಳೆ ಅವರು ಆ ಮಾತುಗಳನ್ನಾಡಿರಬಹುದು’ ಎಂದು ದಾವೂದ್ಖಾನ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮುತುವಲ್ಲಿ ಹೇಳಿಕೆ ಗಮನಕ್ಕೆ ಬಂದಿಲ್ಲ. ಆ ರೀತಿ ಹೇಳಿರುವುದು ನಿಜವಾದರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಎಂ.ಎನ್. ನಾಗರಾಜ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.