ಗುತ್ತಲ (ಹಾವೇರಿ ಜಿಲ್ಲೆ): ಸ್ಥಳೀಯ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ವೇಳೆ ಭಾನುವಾರ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದೆ.
ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡ ಶಾಹಜಹಾನ್ಸಾಬ್ ಅಗಡಿ ಅವರು ಜಾತಿ ನಿಂದನೆ ಮಾಡಿದ್ದರಿಂದ ಇನ್ನೊಂದು ಗುಂಪು ಆಕ್ರೋಶಗೊಂಡು ಗುಂಪು ಘರ್ಷಣೆ ನಡೆಯಿತು. ಈ ಸಂದರ್ಭದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಕಾಂಗೆಸ್ ಬೆಂಬಲಿತ ಜಯವ್ವ ಮುತ್ತಪ್ಪ ಆರಿಕಟ್ಟಿ ಅಧ್ಯಕ್ಷರಾಗಿ ಮತ್ತು ಬಸವರಾಜ ರುದ್ರಾಕ್ಷಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಪಂಚಾಯಿತಿಯ ಹೊರಗಡೆ ಶಾಹಜಹಾನ್ ಸಾಬ್ ಅಗಡಿ ಜಾತಿ ನಿಂದನೆ ಮಾಡಿದರು. ಆಗ ಆಕ್ರೋಶಗೊಂಡ ಇನ್ನೊಂದು ಗುಂಪು ಬಸ್ ನಿಲ್ದಾಣ ಸಮೀಪದ ವೃತ್ತದ ಬಳಿ ಪ್ರತಿಭಟನೆಗೆ ಮುಂದಾಯಿತು. ಈ ಮಧ್ಯೆ ಶಾಹಜಹಾನ್ಸಾಬ್ ಅವರ ಅಂಗಡಿಯ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು. ಆಗ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಹಾವೇರಿಯಿಂದ ಮೀಸಲು ಪಡೆಯನ್ನು ಕರೆಸಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ಪ್ರಕರಣ ದಾಖಲಾಗಿಲ್ಲ. ಪೊಲೀಸ್ ಅಧಿಕಾರಿಗಳು ಎರಡೂ ಗುಂಪಿನ ಮುಖಂಡರನ್ನು ಕರೆಸಿ ಮಾತುಕತೆ ನಡೆಸಿದರು. ಸಂಜೆಯಾದರೂ ಸಂಧಾನ ಮಾತುಕತೆಗಳು ಮುಂದುವರಿದಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.