ADVERTISEMENT

ಗೋಡೆ ಕುಸಿದು ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:59 IST
Last Updated 3 ಸೆಪ್ಟೆಂಬರ್ 2013, 19:59 IST

ಚಾಮರಾಜನಗರ: ಮನೆ ಗೋಡೆ ಕುಸಿದು ಬಾಲಕಿ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲ್ಲೂಕಿನ ಚಂಗವಾಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಅಮೃತಾ (8) ಮೃತಪಟ್ಟ ಬಾಲಕಿ. ಆಕೆಯ ಅಜ್ಜಿ ಗಿಡ್ಡಮ್ಮ ಗಾಯಗೊಂಡಿದ್ದಾರೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದ ಮನೆ ಗೋಡೆ ಶಿಥಿಲಗೊಂಡಿತ್ತು. ಅಜ್ಜಿ, ಮೊಮ್ಮಗಳು ಊಟ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಅಮೃತಾ ಸ್ಥಳದಲ್ಲೇ ಮೃತಪಟ್ಟಿದ್ದು, ಆಕೆಯ ಅಜ್ಜಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳೆ ನಷ್ಟ: ಸೋಮವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಲಕ್ಷಾಂತರ ರೂಪಾಯಿ ಬೆಳೆ ನಷ್ಟವಾಗಿದೆ.

ಚಂದಕವಾಡಿ ಬಳಿ ಬಾಳೆ ಫಸಲು ಹಾಗೂ 5 ಭಾರಿ ಗಾತ್ರದ ತೇಗದ ಮರಗಳು ಬುಡಸಮೇತ ನೆಲಕ್ಕುರುಳಿವೆ. ನಾಗವಳ್ಳಿಯ ಸಂತ ಫಿಲೋಮಿನಾ ಶಾಲೆ ಕಟ್ಟಡದ ಮೇಲ್ಛಾವಣಿ ಹಾರಿ ಹೋಗಿದೆ.

ಸರಗೂರು ಗ್ರಾಮದ ಫೀರ್ ಷರೀಫ್ ಅವರು ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಟಾವಿಗೆ ಬಂದಿದ್ದ ಬಾಳೆಗಿಡಗಳು ನೆಲಕ್ಕುರುಳಿದೆ. ತೆಂಗಿನಮರ, ಹೆಬ್ಬೇವಿನ ಮರಗಳು ಬುಡಸಮೇತ ಉರುಳಿ ಬಿದ್ದಿವೆ.


ಶ್ರೀರಂಗಪಟ್ಟಣ ವರದಿ: ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿಯಿತು.

ಪಟ್ಟಣದ ಪೊಲೀಸ್ ವಸತಿಗೃಹ, ಬೂದಿಗುಂಡಿ, ರಂಗನಾಥನಗರ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ವಾಟರ್‌ಗೇಟ್ ಬಳಿ ಚರಂಡಿಗಳ ನೀರು ಉಕ್ಕಿ ರಸ್ತೆಗೆ ಹರಿದ ಪರಿಣಾಮ ವಾಹನಸಂಚಾರಕ್ಕೆ ತೊಡಕಾಗಿತ್ತು. ಪೊಲೀಸ್ ವಸತಿಗೃಹ ಬಳಿ ನಿಲ್ಲಿಸಿದ್ದ ಬೈಕುಗಳು ಭಾಗಶಃ ನೀರಿನಲ್ಲಿ ಮುಳುಗಿದವು. ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಅವ್ಯವಸ್ಥೆ ಉಂಟಾಗಿದೆ. ಸ್ಥಳೀಯ ಪುರಸಭೆ ಇತ್ತ ಗಮನ ಹರಿಸುತ್ತಿಲ್ಲ ಎಂದು ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಬೆಳಗೊಳ, ಕೆ. ಶೆಟ್ಟಹಳ್ಳಿ, ಕಸಬಾ ಹಾಗೂ ಅರಕೆರೆ ಹೋಬಳಿಗಳಲ್ಲಿ ಕೂಡ ಮಂಗಳವಾರ ಧಾರಾಕಾರ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT