ADVERTISEMENT

ಗೋವಾ ಬಂದರಲ್ಲಿ ಅದಿರು ಅಕ್ರಮ ಸಾಗಣೆ ಇಲ್ಲ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ರಾಯಚೂರು: ಗೋವಾ ರಾಜ್ಯದಲ್ಲಿ ಅದಿರು ಅಕ್ರಮ ಸಾಗಾಣಿಕೆ ತಡೆಗೆ ಹೊಸ ನೀತಿ ರೂಪಿಸಿ ಕಠಿಣ ಕ್ರಮಗಳನ್ನು ಗೋವಾ ಸರ್ಕಾರ ಕೈಗೊಂಡಿದೆ ಎಂದು ಗೋವಾ ರಾಜ್ಯದ ಮುಖ್ಯಮಂತ್ರಿ ದಿಗಂಬರ ಕಾಮತ್ ಹೇಳಿದರು.

ರಾಯಚೂರು ತಾಲ್ಲೂಕಿನ ಕುರವಪುರ ಗ್ರಾಮದ ಶ್ರೀ ಶ್ರೀಪಾದ ಶ್ರೀವಲ್ಲಭ ದತ್ತಾತ್ರೇಯ ದೇವಸ್ಥಾನಕ್ಕೆ ಗುರುವಾರ ಕುಟುಂಬ ವರ್ಗದವರೊಂದಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅದಿರು ಸಾಗಿಸುವ ಎರಡು ಬಂದರುಗಳಲ್ಲಿ ಸುಂಕ ಕಟ್ಟಿಯೇ ಸಾಗಿಸಬೇಕು. ಅದಿರು ಸಾಗಾಣಿಕೆ ನಿಷೇಧ ವಿಚಾರ ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ. ಕರ್ನಾಟಕ ರಾಜ್ಯದೊಂದಿಗೆ ಗೋವಾ ರಾಜ್ಯ ಉತ್ತಮ ಸಂಬಂಧ ಹೊಂದಿದೆ. ಕರ್ನಾಟಕ- ಗೋವಾ ರಾಜ್ಯದ ನಡುವೆ ಮೊದಲಿನಿಂದಲೂ ಉತ್ತಮ ಬಾಂಧವ್ಯವಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಹಲವಾರು ರೀತಿಯ ವಿಚಾರ ವಿನಿಮಯ ಮಾಡಿಕೊಳ್ಳಲಾಗುತ್ತದೆ ಎಂದರು.

ಗೋವಾ ರಾಜ್ಯದಲ್ಲಿ ನೆಲೆಸಿರುವ ಕನ್ನಡಿಗರ ಬಗ್ಗೆ ಆತಂಕ ಬೇಡ. ಗೋವಾದಲ್ಲಿ ಹಲವಾರು ವರ್ಷಗಳಿಂದ ಕನ್ನಡಿಗರು ನೆಲೆಸಿಕೊಂಡು ಬಂದಿದ್ದಾರೆ. ಗೋವಾ ಸರ್ಕಾರವು ಗೋವಾ ರಾಜ್ಯದ ಪ್ರಜೆಗಳಿಗೆ ದೊರಕಿಸುವ ಎಲ್ಲ ರೀತಿಯ ಸೌಲಭ್ಯ, ಸೌಕರ್ಯಗಳನ್ನು ಅಲ್ಲಿ ನೆಲೆಸಿರುವ ಕನ್ನಡಿಗರಿಗೂ ಕಲ್ಪಿಸಿದೆ ಎಂದು ತಿಳಿಸಿದರು.

ADVERTISEMENT

ಮಹಾದಾಯಿ ನದಿಯಿಂದ ಕಳಸಾ ಬಂಡೂರಿ ನಾಲಾಕ್ಕೆ ನೀರು ಹಂಚಿಕೆ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನ್ಯಾಯಮಂಡಳಿ ರಚಿಸಿರುವುದರಿಂದ ನ್ಯಾಯಮಂಡಳಿ ವ್ಯಾಪ್ತಿಗೊಳಪಟ್ಟಿದೆ. ಈ ಬಗ್ಗೆ ಏನನ್ನೂ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.