ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಕೆ.ಟಿ.ನವೀನ್ಕುಮಾರ್ನನ್ನು ಎಸ್ಐಟಿ ಅಧಿಕಾರಿಗಳು ಮಂಪರು ಪರೀಕ್ಷೆಗಾಗಿ ಗುಜರಾತ್ಗೆ ಕರೆದೊಯ್ದಿದ್ದಾರೆ.
ಪದೇ ಪದೇ ಹೇಳಿಕೆ ಬದಲಿಸುತ್ತಿದ್ದ ನವೀನ್ನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಎಸ್ಐಟಿ ಅಧಿಕಾರಿಗಳು ನ್ಯಾಯಾಲಯದ ಅನುಮತಿ ಕೋರಿದ್ದರು. ಪರೀಕ್ಷೆ ಎದುರಿಸಲು ತಾನು ಸಿದ್ಧವಿರುವುದಾಗಿ ಆರೋಪಿಯೇ ಹೇಳಿಕೆ ನೀಡಿದ್ದರಿಂದ, ನ್ಯಾಯಾಧೀಶರು ಮಾರ್ಚ್ 12ರಂದು ಅನುಮತಿ ಮಂಜೂರು ಮಾಡಿದ್ದರು.
ಆ ಬಳಿಕ ಗುಜರಾತ್ ಎಫ್ಎಸ್ಎಲ್ಗೆ ಪತ್ರ ಬರೆದಿದ್ದ ಎಸ್ಐಟಿ, ‘ಆರೋಪಿಯನ್ನು ಯಾವತ್ತು ಕರೆದುಕೊಂಡು ಬರಬೇಕು ಹಾಗೂ ಪರೀಕ್ಷೆ ಪೂರ್ಣಗೊಳ್ಳಲು ಎಷ್ಟು ದಿನ ಬೇಕಾಗಬಹುದು’ ಎಂಬುದನ್ನು ತಿಳಿಸುವಂತೆ ಕೋರಿತ್ತು. ಅದಕ್ಕೆ ಏ.10ರಂದು ಪ್ರತಿಕ್ರಿಯೆ ನೀಡಿರುವ ಎಫ್ಎಸ್ಎಲ್ ತಜ್ಞರು, ‘ಪರೀಕ್ಷೆ ಪೂರ್ಣಗೊಳ್ಳಲು ಕನಿಷ್ಠ ಐದು ದಿನ ಬೇಕಾಗುತ್ತದೆ. ಏ.15 ರಿಂದ ಏ.30ರ ಮಧ್ಯೆ ಕರೆದುಕೊಂಡು ಬನ್ನಿ’ ಎಂದಿದ್ದರು.
‘ಶನಿವಾರ ಬೆಳಿಗ್ಗೆ ನವೀನ್ನನ್ನು ಗುಜರಾತ್ಗೆ ಕರೆದುಕೊಂಡು ಹೋಗಲಾಗಿದೆ. ಮಂಪರು ಪರೀಕ್ಷೆ ಪ್ರಕ್ರಿಯೆಗೆ ಸಂಬಂಧಿಸಿದ ಪ್ರತಿ ಬೆಳವಣಿಗೆಯನ್ನೂ ನ್ಯಾಯಾಧೀಶರ ಗಮನಕ್ಕೆ ತರುತ್ತಿದ್ದೇವೆ’ ಎಂದು ಎಸ್ಐಟಿ ಅಧಿಕಾರಿಯೊಬ್ಬರು ತಿಳಿಸಿದರು. ಮಂಪರು ಪರೀಕ್ಷೆಗೆ ಕಳುಹಿಸದಂತೆ ನವೀನ್ 3 ದಿನಗಳ ಹಿಂದೆ ಪರಪ್ಪನ ಅಗ್ರಹಾರ ಕಾರಗೃಹದ ಮುಖ್ಯ ಅಧೀಕ್ಷಕ ಸೋಮಶೇಖರ್ ಅವರಿಗೆ ಪತ್ರ ಬರೆದಿದ್ದ ಎನ್ನಲಾಗಿತ್ತು. ಆದರೆ, ‘ಅಂತಹ ಯಾವುದೇ ಪತ್ರ ನನ್ನ ಕೈಸೇರಿಲ್ಲ’ ಎಂದು ಸೋಮಶೇಖರ್ ಸ್ಪಷ್ಟಪಡಿಸಿದರು.
**
‘ಡಿವೈಎಸ್ಪಿ ನೇತೃತ್ವದ ತಂಡವು ಶನಿವಾರ ಬೆಳಿಗ್ಗೆಯೇ ನವೀನ್ನನ್ನು ಗುಜರಾತ್ಗೆ ಕರೆದುಕೊಂಡು ಹೋಗಿದೆ. ಮಂಪರು ಪರೀಕ್ಷೆ ಪ್ರಕ್ರಿಯೆಗೆ ಸಂಬಂಧಿಸಿದ ಪ್ರತಿ ಬೆಳವಣಿಗೆಯನ್ನೂ ನ್ಯಾಯಾಧೀಶರ ಗಮನಕ್ಕೆ ತರುತ್ತಿದ್ದೇವೆ’ ಎಂದು ಎಸ್ಐಟಿ ಅಧಿಕಾರಿಯೊಬ್ಬರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.