ADVERTISEMENT

ಗ್ರಾಮಸ್ಥರ ಧರ್ಮದೇಟು ತಿಂದ ಕಳ್ಳ ಸಾವು

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 19:30 IST
Last Updated 11 ಜೂನ್ 2011, 19:30 IST
ಗ್ರಾಮಸ್ಥರ ಧರ್ಮದೇಟು ತಿಂದ ಕಳ್ಳ ಸಾವು
ಗ್ರಾಮಸ್ಥರ ಧರ್ಮದೇಟು ತಿಂದ ಕಳ್ಳ ಸಾವು   

ಮದ್ದೂರು: ತಾಲ್ಲೂಕಿನ ಮಲ್ಲನಾಯಕನಹಳ್ಳಿ ಮಾರಮ್ಮ ದೇಗುಲದಲ್ಲಿ ಕಳವು ಮಾಡಲು ಯತ್ನಿಸಿದ ಕಳ್ಳನೊಬ್ಬ ಗ್ರಾಮಸ್ಥರಿಂದ ಥಳಿತಕ್ಕೆ ಒಳಗಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಗಿನ ಜಾವ ಜರುಗಿದೆ.  ಮೃತ ವ್ಯಕ್ತಿ ರಾಮನಗರದ ವೆಂಕಟೇಶ್ (35), ಶವವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿಡಲಾಗಿದೆ.

ಘಟನೆ ವಿವರ:
ಬೆಳಗಿನ ಜಾವ 2.30ಕ್ಕೆ   ಮಾರಮ್ಮ ದೇಗುಲದ ಬಾಗಿಲು ಮುರಿದು ಒಳನುಗ್ಗಿದ ಮೂರು ಮಂದಿ, ಹುಂಡಿಯನ್ನು ಒಡೆದು ಹಣವನ್ನು ಎಣಿಕೆ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಒಬ್ಬ ಕಳ್ಳ ಮೇಲೆದ್ದಾಗ ಗಂಟೆ ಬಡಿದು ಶಬ್ದವಾಯಿತು. ಆ ಸಂದರ್ಭದಲ್ಲಿ ಯುವಕನೊಬ್ಬ ಬಹಿರ್ದೆಶೆಗೆಂದು ಈಚೆ ಬಂದಿದ್ದು, ಶಬ್ದ ಕೇಳಿ ಅಲ್ಲಿಗೆ ಬಂದು ನೋಡಿದ.

ಕೂಡಲೇ ಆ ಯುವಕ ಗ್ರಾಮಸ್ಥರನ್ನು ಎಚ್ಚರಗೊಳಿಸಿದ. ಗ್ರಾಮಸ್ಥರು ದೊಣ್ಣೆಗಳೊಂದಿಗೆ ಬಂದಾಗ  ಇಬ್ಬರು ಪರಾರಿಯಾದರು. ಇನ್ನೊಬ್ಬ ಕಳ್ಳ ಸಿಕ್ಕಿ ಬಿದ್ದ. ಮಚ್ಚಿನಿಂದ ಹೆದರಿಸಲು ಪ್ರಯತ್ನಿಸಿದ ಆ ಕಳ್ಳ,  ತಪ್ಪಿಸಿಕೊಳ್ಳಲು ಪ್ರಯತ್ನಿಸಿ ವಿಫಲನಾಗಿ ಗ್ರಾಮಸ್ಥರಿಂದ ತೀವ್ರ ಹಲ್ಲೆಗೀಡಾದ ಎನ್ನಲಾಗಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ತೀವ್ರ ಗಾಯಗೊಂಡಿದ್ದ ಆತನನ್ನು ಪಟ್ಟಣ ಆಸ್ಪತ್ರೆಗೆ ದಾಖಲಿಸಿದರು. ನಂತರ ಅಲ್ಲಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಬೆಳಿಗ್ಗೆ  ಆತ ತೀವ್ರ ರಕ್ತಸ್ರಾವದಿಂದ ಮೃತಪಟ್ಟ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್, ಸಿಪಿಐ ಪ್ರಶಾಂತ್ ಅವರೊಂದಿಗೆ ಶನಿವಾರ ಬೆಳಿಗ್ಗೆ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಿದರು  ಸಂಬಂಧ ಕೆಸ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.