ADVERTISEMENT

ಚಾಮುಂಡಿಬೆಟ್ಟ: 2 ಎಕರೆ ಅರಣ್ಯ ಭಸ್ಮ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST
ಚಾಮುಂಡಿಬೆಟ್ಟದಲ್ಲಿ ಸೋಮವಾರ ಕಾಣಿಸಿಕೊಂಡ ಬೆಂಕಿಗೆ ಅರಣ್ಯ ಭಸ್ಮವಾಗಿದೆ
ಚಾಮುಂಡಿಬೆಟ್ಟದಲ್ಲಿ ಸೋಮವಾರ ಕಾಣಿಸಿಕೊಂಡ ಬೆಂಕಿಗೆ ಅರಣ್ಯ ಭಸ್ಮವಾಗಿದೆ   

ಮೈಸೂರು: ಚಾಮುಂಡಿಬೆಟ್ಟದ ದೈವಿವನದ ಸಮೀಪ ಸೋಮವಾರ ಕಾಣಿಸಿಕೊಂಡ ಕಾಳ್ಗಿಚ್ಚಿಗೆ ಸುಮಾರು ಎರಡು ಎಕರೆ ಅರಣ್ಯ ಭಸ್ಮವಾಗಿದೆ. ಕುರುಚಲು ಗಿಡ ಮತ್ತು ಒಣಗಿದ ಹುಲ್ಲು ಬೆಂಕಿಗೆ ಆಹುತಿಯಾಗಿದೆ.

ಎರಡೂವರೆ ಗಂಟೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ, ಅಗ್ನಿಶಾಮಕ ಮತ್ತು ತುರ್ತುಸೇವಾ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ದಟ್ಟ ಹೊಗೆಯನ್ನು ಗಮನಿಸಿದ ಅರಣ್ಯ ವೀಕ್ಷಕರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮೈಸೂರು, ತಿ.ನರಸೀಪುರ ಹಾಗೂ ನಂಜನಗೂಡು ವ್ಯಾಪ್ತಿಯ 50ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾಳ್ಗಿಚ್ಚು ಆರಿಸಿದರು.

ADVERTISEMENT

ಅಗ್ನಿಶಾಮಕ ವಾಹನ ತೆರಳಲು ಸಾಧ್ಯವಾಗದ ಜಾಗದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯನಿರ್ವಹಿಸಿದ್ದಾರೆ. ಮರದ ಹಸಿ ಸೊಪ್ಪು ಹಾಗೂ ಅಗ್ನಿನಂದಕ ಉಪಕರಣಗಳ ಸಹಾಯದಿಂದ ಬೆಂಕಿಯ ಕೆನ್ನಾಲಿಗೆ ವಿಸ್ತರಿಸದಂತೆ ತಡೆದಿದ್ದಾರೆ. ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಸೇದಿ ಬಿಸಾಡಿದ ಸಿಗರೇಟ್‌ ತುಂಡಿನ ಕಿಡಿಗೆ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.