ADVERTISEMENT

ಚಾಮುಂಡಿ ಬೆಟ್ಟಕ್ಕೆ ಜಯಲಲಿತಾ ಭೇಟಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 14:30 IST
Last Updated 24 ಫೆಬ್ರುವರಿ 2011, 14:30 IST

ಮೈಸೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತ ಅವರು 63ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರದ ಚಾಮುಂಡಿ ಬೆಟ್ಟಕ್ಕೆ ಗುರುವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಚಾಮುಂಡಿ ಬೆಟ್ಟದ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ್ ದೀಕ್ಷಿತ್ ಮತ್ತು ಆಡಳಿತ  ಮಂಡಳಿಯವರು ಜಯಲಲಿತ ಅವರಿಗೆ ಪೂರ್ಣಕುಂಭ ಸ್ವಾಗತ ಕೋರಿ ದೇವಸ್ಥಾನಕ್ಕೆ ಕರೆದೊಯ್ದರು.  ಸುಮಾರು 20 ನಿಮಿಷಗಳ ಕಾಲ ಪೂಜೆ ನಡೆಯಿತು.
ಝಡ್ ಪ್ಲಸ್ ವಿಶೇಷ ಭದ್ರತೆಯೊಂದಿಗೆ ಅವರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದರು. ಜಯಲಲಿತ ಅವರೊಂದಿಗೆ ಸ್ನೇಹಿತೆ ಶಶಿಕಲಾ ಹಾಗೂ ಎಐಡಿಎಂಕೆ ಕರ್ನಾಟಕ ರಾಜ್ಯ ಕಾರ್ಯದರ್ಶಿ ಪುಗಳೆಂದಿ ಇದ್ದರು.

ದೇವಾಲಯದಿಂದ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ‘ಕರ್ನಾಟಕ-ತಮಿಳುನಾಡು ಜನತೆ ಸಹಬಾಳ್ವೆಯಿಂದ ಇರಬೇಕೆಂದು ಹಾರೈಸುತ್ತೇನೆ. ಎಲ್ಲರಿಗೂ ಒಳಿತಾಗಲೆಂದು ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸುವ ಸಲುವಾಗಿ ಇಲ್ಲಿಗೆ ಬಂದಿದ್ದೇನೆ. ರಾಜಕೀಯ ಮಾತನಾಡಲು ಬಯಸುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.