ADVERTISEMENT

ಚಾಲಕನ ಸಮಯ ಪ್ರಜ್ಞೆ: ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 4 ಜನವರಿ 2013, 19:59 IST
Last Updated 4 ಜನವರಿ 2013, 19:59 IST
ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಕಡಗರವಳ್ಳಿ ಬಳಿ ರೈಲು ಹಳಿ ಬೋಲ್ಟ್ ಕಳಚಿ ಪ್ರತ್ಯೇಕಗೊಂಡಿರುವುದು (ಎಡ ಚಿತ್ರ),
ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಕಡಗರವಳ್ಳಿ ಬಳಿ ರೈಲು ಹಳಿ ಬೋಲ್ಟ್ ಕಳಚಿ ಪ್ರತ್ಯೇಕಗೊಂಡಿರುವುದು (ಎಡ ಚಿತ್ರ),   

ಸಕಲೇಶಪುರ: ಬೆಂಗಳೂರು-ಕಣ್ಣೂರು ರೈಲು ಹಳಿ ತಪ್ಪಿ, ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರಾದ ಘಟನೆ ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಕಡಗರಹಳ್ಳಿ ಬಳಿ ಶುಕ್ರವಾರ ನಸುಕಿನಲ್ಲಿ ನಡೆದಿದೆ.

ಇಲ್ಲಿನ ರೈಲು ನಿಲ್ದಾಣದಿಂದ ಸುಬ್ರಹ್ಮಣ್ಯದತ್ತ ಹೊರಟ ರೈಲು ಮುಂಜಾನೆ 4.40ರ ಸುಮಾರಿಗೆ ಎಡೆಕುಮರಿ ಬಳಿ ಹಳಿತಪ್ಪಿದೆ. ಹಳಿಗೆ ಹಾಕಿದ್ದ ಬೋಲ್ಟ್‌ಗಳು ತುಂಡಾಗಿ ಹಳಿ ಬೇರ್ಪಟ್ಟಿದ್ದರಿಂದ ರೈಲಿನ ಎಂಜಿನ್ ಹಳಿ ತಪ್ಪಿದೆ. ಪಶ್ಚಿಮಘಟ್ಟದ ಬೆಟ್ಟಗಳ ನಡುವಿನ ಕಡಿದಾದ ಮಾರ್ಗವಾಗಿದ್ದರಿಂದ ಇಲ್ಲಿ ಕೇವಲ 20 ಕಿ.ಮೀ. ವೇಗದಲ್ಲಿ ರೈಲು ಚಲಿಸುತ್ತದೆ. ಇದರಿಂದಾಗಿ ಎಂಜಿನ್ ಹಳಿತಪ್ಪುತ್ತಿದ್ದಂತೆ ಎಚ್ಚರಗೊಂಡ ಚಾಲಕ ದೊಡ್ಡ ಅನಾಹುತ ತಡೆಯುವಲ್ಲಿ ಯಶಸ್ವಿಯಾದರು.

ರೈಲು ನಿಂತ ಪರಿಣಾಮ 1600 ಮಂದಿ ಪ್ರಯಾಣಿಕರು ನಸುಕಿನ 4.40ರಿಂದ 9 ಗಂಟೆವರೆಗೂ ಊಟ, ತಿಂಡಿ, ನೀರು ಇಲ್ಲದೆ ಕಾಡಿನ ಮಧ್ಯದಲ್ಲಿ ಕಾಲ ತಳ್ಳಬೇಕಾಯಿತು. ಮಧ್ಯಾಹ್ನ 11 ಗಂಟೆ ಸುಮಾರಿಗೆ ಬೇರೆ ಎಂಜಿನ್ ಮೂಲಕ ಪ್ರಯಾಣಿಕರ ಬೋಗಿಗಳನ್ನು ಸಕಲೇಶಪುರದ ರೈಲ್ವೆ ನಿಲ್ದಾಣಕ್ಕೆ ಮರಳಿ ತರಲಾಯಿತು.

ಕೇರಳ, ಮಂಗಳೂರು, ಧರ್ಮಸ್ಥಳ, ಸುಬ್ರಹ್ಮಣ್ಯ ಮೊದಲಾದ ಪ್ರದೇಶಗಳಿಗೆ ಹೊರಟಿದ್ದ ಪ್ರಯಾಣಿಕರನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸುಮಾರು 20 ಬಸ್ಸುಗಳಲ್ಲಿ ಕಳಿಸುವ ವ್ಯವಸ್ಥೆಯನ್ನು ರೈಲ್ವೆ ಅಧಿಕಾರಿಗಳು ಮಾಡಿದ್ದರು.

ಅಪಘಾತ ನಡೆದ ಸ್ಥಳ ಕಾಡು ಮತ್ತು  ಪ್ರಪಾತದ ಸ್ಥಳವಾಗಿದ್ದರಿಂದ ಭಯಭೀತರಾಗಿದ್ದ ಪ್ರಯಾಣಿಕರು ಬದುಕಿದೆಯ ಬಡ ಜೀವವೇ ಎಂದು ನಿಟ್ಟುಸಿರು ಬಿಟ್ಟರು. ಮಧ್ಯಾಹ್ನ 12.30ರ ವರೆಗೂ ಸಕಲೇಶಪುರ ರೈಲು ನಿಲ್ದಾಣ ಪ್ರಯಾಣಿಕರಿಂದ ಗಿಜಿಗುಡುತ್ತಿತ್ತು. ದಣಿದಿದ್ದ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ವತಿಯಿಂದ ಕುಡಿಯುವ ನೀರು, ತಿಂಡಿ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT