ಹೈದರಾಬಾದ್: ಚಿಕ್ಕಮಗಳೂರು ಈವರೆಗೆ ಅತ್ಯುತ್ತಮ ಕಾಫಿ, ಪಶ್ಚಿಮ ಘಟ್ಟ ಮತ್ತು ಬೋರ್ಗರೆಯುವ ಜಲಪಾತಗಳಿಂದ ಖ್ಯಾತಿ ಪಡೆದಿತ್ತು. ಇನ್ನು ಮುಂದೆ ದಕ್ಷಿಣ ಭಾರತದಿಂದ, ಅದರಲ್ಲೂ ಕರ್ನಾಟಕದಿಂದ ಮೊದಲ ಯುದ್ಧವಿಮಾನ ಮಹಿಳಾ ಪೈಲಟ್ನ್ನು ನೀಡಿದ ಖ್ಯಾತಿಗೂ ಪಾತ್ರವಾಗಲಿದೆ. ಅಂತಹದ್ದೊಂದು ಸಾಧನೆಯನ್ನು ಜಿಲ್ಲೆಯ ಮೇಘನಾ ಶಾನಭೋಗ್ ಮಾಡಿದ್ದಾರೆ.
ಇಲ್ಲಿನ ದುಂಡಿಗಲ್ ವಾಯುಪಡೆ ಅಕಾಡೆಮಿಯಲ್ಲಿ ಮೇಘನಾ ಯುದ್ಧವಿಮಾನ ಪೈಲಟ್ ತರಬೇತಿ ಪದವಿ ಪೂರೈಸಿದ್ದಾರೆ. ಪದವಿ ಪೂರೈಸಿದವರ ಪಥಸಂಚಲನ ಶನಿವಾರ ಇಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಮೇಘನಾ ಮತ್ತು ಮತ್ತೋರ್ವ ಯುವತಿಯನ್ನು ಯುದ್ಧವಿಮಾನದ ಪೈಲಟ್ ಆಗಿ ಆಯ್ಕೆ ಮಾಡಿರುವ ವಿಷಯವನ್ನು ಅಧಿಕೃತವಾಗಿ ಘೋಷಿಸಲಾಯಿತು.
ಮೇಘನಾ ಅವರ ತಂದೆ ಎಂ.ಕೆ.ಸುರೇಶ್ ವಕೀಲರಾಗಿದ್ದಾರೆ. ತಾಯಿ ಉಡುಪಿಯ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾಗಿದ್ದಾರೆ.
ಮೇಘನಾ ಅವರು ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಸ್ಕೂಲ್ನಲ್ಲಿ ಪ್ರೌಢಶಿಕ್ಷಣ ಮತ್ತು ಮೈಸೂರಿನ ಜಯ ಚಾಮರಾಜೇಂದ್ರ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪೂರೈಸಿದ್ದಾರೆ.
ಅಲ್ಲದೆ ಮನಾಲಿಯಲ್ಲಿ ಪರ್ವತಾರೋಹಣ ಮತ್ತು ಗೋವಾದಲ್ಲಿ ಪ್ಯಾರಾಗ್ಲೈಡಿಂಗ್ ತರಬೇತಿ ಪಡೆದಿದ್ದಾರೆ. ದುಂಡಿಗಲ್ನ ಏರ್ಫೋರ್ಸ್ ಅಕಾಡೆಮಿಗೆ ಅವರು 2017ರ ಜನವರಿಯಲ್ಲಿ ಪ್ರವೇಶ ಪಡೆದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.