ADVERTISEMENT

ಛತ್ತೀಸ್ ಗಡದಿಂದ ರಾಜ್ಯಕ್ಕೆ 100 ಮೆ.ವಾ. ಹೆಚ್ಚುವರಿ ವಿದ್ಯುತ್: ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2011, 9:30 IST
Last Updated 2 ಅಕ್ಟೋಬರ್ 2011, 9:30 IST

ಛತ್ತೀಸ್ ಗಡ (ಪಿಟಿಐ): ಛತ್ತೀಸ್ ಗಡ ರಾಜ್ಯವು ಕರ್ನಾಟಕಕ್ಕೆ ವಿದ್ಯುತ್ತಿನ ತೀವ್ರ ಬಿಕ್ಕಟ್ಟಿನಿಂದ ಪಾರಾಗುವ ಸಲುವಾಗಿ ಮುಂದಿನ ಆರು ತಿಂಗಳಲ್ಲಿ ಹಾಲಿ 200 ಮೆ.ವಾ. ವಿದ್ಯುತ್ ಸರಬರಾಜಿನ ಜೊತೆಗೆ 100 ಮೆ.ವಾ ಹೆಚ್ಚುವರಿ ವಿದ್ಯತ್ತನ್ನು ಸರಬರಾಜು ಮಾಡಲಿದೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಭಾನುವಾರ ಇಲ್ಲಿ ತಿಳಿಸಿದರು.

ಛತ್ತೀಸ್ ಗಡ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ನಮಗೆ ಬೇಕಾಗಿದ್ದಲ್ಲಿ  ಮುಂದಿನ ಆರು ತಿಂಗಳಲ್ಲಿ 100 ಮೆ.ವಾ.ದಷ್ಟು ಹೆಚ್ಚುವರಿ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಶನಿವಾರ ರಾತ್ರಿಯಿಂದ 200 ಮೆ.ವಾ. ವಿದ್ಯುತ್ ಸರಬರಾಜಿಗೆ ಅವರು ವ್ಯವಸ್ಥೆ ಮಾಡಿದ್ದಾರೆ ಎಂದು  ಅವರು ಗಾಂಧಿ ಜಯಂತಿ ಸಮಾರಂಭ ಕಾಲದಲ್ಲಿ ಪ್ರತ್ಯೇಕವಾಗಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು.

ರಾಜ್ಯದ ಬರಪೀಡಿತ ಜಿಲ್ಲೆಗಳ ಪಟ್ಟಿಯ ಔಪಚಾರಿಕ ಘೋಷಣೆಯನ್ನು ತೊಂದರೆಗೀಡಾದ ಪ್ರದೇಶಗಳ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸೋಮವಾರ ಪ್ರಕಟಿಸುವುದಾಗಿ ಮುಖ್ಯಮಂತ್ರಿ ನುಡಿದರು.

ಅತ್ಯಂತ ಕಡಿಮೆ ಮಳೆ ಬಿದ್ದಿರುವ ಕಡೂರು, ಚಿತ್ರದುರ್ಗ, ವಿಜಾಪುರ, ಬಾಗಲಕೋಟೆ ಮತ್ತು ಚಿಂದನೂರು ಪ್ರದೇಶಗಳಲ್ಲಿನ ರೈತರ ಸಮಸ್ಯೆ ನಿವಾರಿಸಲು ಸರ್ಕಾರವು ಕ್ರಮ ಕೈಗೊಳ್ಳುವುದು ಎಂದು ಅವರು ಹೇಳಿದರು.

ಬಿಜೆಪಿ ಕಾರ್ಯಕರ್ತರೊಬ್ಬರು ಚಪ್ಪಲಿ ಎಸೆದ ಪ್ರಕರಣದ ವಿವರಗಳ ಬಗ್ಗೆ ವಸತಿ ಸಚಿವ ವಿ. ಸೋಮಣ್ಣ ಅವರ ಜೊತೆಗೆ ದೂರವಾಣಿಯಲ್ಲಿ ಮಾತನಾಡಿರುವುದಾಗಿ  ಮುಖ್ಯಮಂತ್ರಿ ಹೇಳಿದರು. ಈ ಘಟನೆ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿರುವುದಾಗಿ ಅವರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.