ಚನ್ನರಾಯಪಟ್ಟಣ: ಸಂಯುಕ್ತ ಜನತಾ ದಳದ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಚ್. ಸತೀಶ್ (41) ಅವರು ತಾಲ್ಲೂಕಿನ ದೊಡ್ಡಕರಡೆ ಗ್ರಾಮದಲ್ಲಿ ಗುರುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗುರುವಾರ ರಾತ್ರಿ ಬೆಂಗಳೂರಿನಿಂದ ಗ್ರಾಮಕ್ಕೆ ಆಗಮಿಸಿದ್ದ ಸತೀಶ್, ಹೆತ್ತವರನ್ನು ಮಾತನಾಡಿಸಿ ಮನೆಯಲ್ಲಿ ಮಲಗಿದ್ದರು. ಮಧ್ಯರಾತ್ರಿ ಎದ್ದು ಮನೆಯ ಪಕ್ಕದ ಟ್ರ್ಯಾಕ್ಟರ್ ಶೆಡ್ಗೆ ಹೋಗಿ ನೇಣು ಹಾಕಿಕೊಂಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಸತೀಶ್ ಅವರ ಸಹೋದರನ ಪತ್ನಿ ರಂಗೋಲಿ ಡಬ್ಬಿ ತರಲು ಶೆಡ್ಗೆ ಹೋದಾಗ ನೇಣು ಬಿಗಿದ ಸ್ಥಿತಿಯಲ್ಲಿದ್ದ ಸತೀಶ್ ಶವ ಕಾಣಿಸಿದೆ.
ಕಳೆದ ಮೇ ತಿಂಗಳಲ್ಲಿ ನಡೆದ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಯು ಪಕ್ಷದಿಂದ ಸತೀಶ್ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಆಗಾಗ ಈ ವಿಷಯವನ್ನು ಪತ್ನಿ ಮಮತಾ ಬಳಿ ಪ್ರಸ್ತಾಪಿಸುತ್ತಾ `ನಂಬಿದವರು ಚುನಾವಣೆಯಲ್ಲಿ ಮೋಸ ಮಾಡಿದರು' ಎಂದು ಬೇಸರ ವ್ಯಕ್ತಪಡಿಸುತ್ತಿದ್ದರು. ಧೃತಿಗೆಡಬೇಡಿ ಎಂದು ಪತ್ನಿ ಧೈರ್ಯ ಹೇಳಿದ್ದರು.
ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಡಾ.ಎಂ.ಪಿ. ನಾಡಗೌಡ, ಮುಖಂಡರಾದ ಸುಬ್ಬಣ್ಣ, ಪ್ರಕಾಶ್, ಬಿ.ಕೆ. ಚೆಲುವೇಗೌಡ ಮುಂತಾದವರು ಕುಟುಂಬದವರಿಗೆ ಸಾಂತ್ವನ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.