
ಧಾರವಾಡ: ಹಿರಿಯ ಪಕ್ಷಿ ವಿಜ್ಞಾನಿ, ಕರ್ನಾಟಕ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಜೇಮ್ಸ್ ಉತ್ತಂಗಿ (98) ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ದೀರ್ಘಕಾಲದ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಅವರಿಗೆ ನಾಲ್ವರು ಪುತ್ರಿಯರು ಇದ್ದಾರೆ.
ಭಾರತದ ಮೈನಾ ಪಕ್ಷಿಗಳ ಕುರಿತು ಜನಪದ ಸಾಹಿತ್ಯ ಕುರಿತ ಅವರ ಪ್ರಬಂಧಕ್ಕೆ ಇಟಲಿಯ ಪಕ್ಷಿಶಾಸ್ತ್ರ ಸಂಸ್ಥೆ ‘ಸೋಷಿಯೊ ಆನರೇರಿಯೋ’ ಪ್ರಶಸ್ತಿ ನೀಡಿ ಗೌರವಿಸಿದೆ. ರಾಜ್ಯ ಅರಣ್ಯ ಹಾಗೂ ಪರಿಸರ ಇಲಾಖೆ 1995ರಲ್ಲಿ ಪರಿಸರ ಪ್ರೇಮಿ ಪ್ರಶಸ್ತಿ ನೀಡಿ ಗೌರವಿಸಿದೆ.
2005ರಲ್ಲಿ ‘ನ್ಯಾಷನಲ್ ಕೌನ್ಸಿಲ್ ಫಾರ್ ಎಜುಕೇಷನಲ್ ರಿಸರ್ಚ್ ಮತ್ತು ಟ್ರೇನಿಂಗ್’ (ಎನ್ಸಿಇಆರ್ಟಿ)ಸಂಸ್ಥೆಯು ಜೀವಮಾನ ಸಾಧನೆಗಾಗಿ ರಾಷ್ಟ್ರಪತಿಗಳ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. 2006ರಲ್ಲಿ ಧಾರವಾಡ ಅಕಾಡೆಮಿ ಆಫ್ ಸೈನ್ಸ್ನವರು ಆನರರಿ ಫೆಲೊ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಶನಿವಾರ ಸಂಜೆ ಅಂತ್ಯಕ್ರಿಯೆ ನೆರವೇರಿತು.
ಎಲೆಮರೆ ಕಾಯಿಯಾಗೇ ಉಳಿದ ಪಕ್ಷಿ ವಿಜ್ಞಾನಿ
ಧಾರವಾಡ: ಭಾರತದ ‘ಪಕ್ಷಿ ಮಾನವ’ ಸಲೀಂ ಅಲಿ ಅವರು ಮೆಚ್ಚಿಕೊಂಡ, ಧಾರವಾಡ ನೆಲದ ಅಪ್ಪಟ ದೇಸಿ ಪ್ರತಿಭೆ ಡಾ.ಜೇಮ್ಸ್ ಚನ್ನಪ್ಪ ಉತ್ತಂಗಿ (98) ಬಹುತೇಕ ಎಲೆಮರೆಯ ಕಾಯಿಯಂತೆಯೇ ಜೀವನ ಸವೆಸಿದವರು.
ಸರ್ವಜ್ಞನ ವಚನಗಳನ್ನು ಸಾಹಿತ್ಯ ಲೋಕಕ್ಕೆ ಕಾಣಿಕೆಯಾಗಿ ನೀಡಿದ ಉತ್ತಂಗಿ ಚನ್ನಪ್ಪನವರ ಪುತ್ರ ಜೇಮ್ಸ್ ಉತ್ತಂಗಿ, ವಿಜ್ಞಾನ ಕ್ಷೇತ್ರದಲ್ಲಿ ಮೇರು ಸಾಧನೆಯನ್ನು ಕೈಗೊಂಡವರು. ಆದರೆ, ತಮ್ಮ ಸಂಶೋಧನೆಗಳನ್ನು ಇತರರ ಮುಂದೆ ತಿಳಿಸಲು ಅವರು ಸಂಕೋಚಪಟ್ಟುಕೊಂಡ ಕಾರಣ ವಿಜ್ಞಾನ ಲೋಕ ಕೊಂಚ ಬಡವಾಯಿತು.
‘ಲಂಡನ್ನ ಓರಿಯಂಟಲ್ ಬರ್ಡ್ ಕ್ಲಬ್’ನ (ಒಬಿಸಿ) ಅಪೇಕ್ಷೆಯ ಮೇರೆಗೆ ಮೂರು ಪ್ರಮುಖ ಸಂಗತಿಗಳ ಬಗ್ಗೆ ಸಂಶೋಧನೆ ನಡೆಸಿ ಅದರ ವರದಿಯನ್ನು ಸಂಸ್ಥೆಗೇ ನೀಡಿದರು. ಅವುಗಳೆಂದರೆ, ‘ಮಹಾದಾಯಿ ನದಿ ಕಣಿವೆಯ ಸುತ್ತಲಿನ ಪರಿಸರ ವೈವಿಧ್ಯ’, ‘ಅವಿಭಜಿತ ಧಾರವಾಡ ಜಿಲ್ಲೆಯಲ್ಲಿನ ಪಕ್ಷಿಗಳು’ ಹಾಗೂ ‘ಅಣಶಿ ರಾಷ್ಟ್ರೀಯ ಉದ್ಯಾನವನದ ಪಕ್ಷಿಗಳ ಸಮೀಕ್ಷೆ’.
ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ಉತ್ತಂಗಿಯವರು ಚಿಕ್ಕಂದಿನಿಂದಲೂ ಬಹಳ ಚುರುಕು ಸ್ವಭಾವದವರು ಹಾಗೂ ಅಷ್ಟೇ ಬುದ್ಧಿಮತ್ತೆಯುಳ್ಳವರು. ಅವರು ಮಂಡಿಸಿದ ‘ಉತ್ತರ ಕರ್ನಾಟಕ ಹಾಗೂ ಉತ್ತರ ಗುಜರಾತಿನ ಕಪ್ಪೆಗಳು, ಸಹಸ್ರಪಾದಿಗಳು ಹಾಗೂ ಗೆದ್ದಲು ಹುಳುಗಳ ಏಕಕೋಶ ಪರೋಪಜೀವಿಗಳ ಒಂದು ಅಧ್ಯಯನ’ ಎಂಬ ಸಂಶೋಧನಾ ಪ್ರಬಂಧ ಕರ್ನಾಟಕ ವಿ.ವಿ.ಯ ಪ್ರಾಣಿಶಾಸ್ತ್ರ ವಿಭಾಗದಿಂದ ಹೊರಬಂದ ಮೊದಲ ಪಿಎಚ್.ಡಿ ಪ್ರಬಂಧ.
ಗೆದ್ದಲು ಹುಳುಗಳ ಬಗ್ಗೆಯೇ ಏಕೆ ಸಂಶೋಧನೆ ಕೈಗೊಂಡರು ಎಂಬ ಬಗ್ಗೆ ಒಂದು ಸ್ವಾರಸ್ಯಕರ ಘಟನೆಯನ್ನು ಜೆ.ಸಿ.ಉತ್ತಂಗಿ ಅವರ ಜೀವನ ಚರಿತ್ರೆ ಬರೆದಿರುವ ಡಾ. ಆರ್. ಪರಿಮಳಾ ವಿವರಿಸುವುದು ಹೀಗೆ: ‘ಜೇಮ್ಸ್ ತಂದೆ ಚನ್ನಪ್ಪ ಉತ್ತಂಗಿ ಸಾಕಷ್ಟು ಸಾಹಿತ್ಯವನ್ನು ರಚನೆ ಮಾಡಿದ್ದರು. ಆದರೆ, ಬಹುತೇಕ ಸಾಹಿತ್ಯವನ್ನು ಗೆದ್ದಲು ಹುಳುಗಳು ತಿಂದು ಹಾಕಿದ್ದವು. ಈ ಹುಳುಗಳ ಬಗ್ಗೆ ಸಂಶೋಧನೆ ಮಾಡುವಂತೆ ಹೇಳಿದ್ದೇ ಯುವಕ ಜೇಮ್ಸ್ಗೆ ಒಬ್ಬ ಶ್ರೇಷ್ಠ ವಿಜ್ಞಾನಿಯಾಗಲು ಕಾರಣವಾಯಿತು’.
ಧಾರವಾಡ ಅಂದು ಬಾಂಬೆ ಪ್ರೆಸಿಡೆನ್ಸಿಯಲ್ಲಿ ಇದ್ದುದರಿಂದ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದ ಉತ್ತಂಗಿ ಅವರನ್ನು ಗುಜರಾತಿನ ವೀಸ ನಗರಕ್ಕೆ ಉಪನ್ಯಾಸಕರಾಗಿ ಬಡ್ತಿ ನೀಡಿ ವರ್ಗಾವಣೆ ಮಾಡಲಾಯಿತು. ಅಲ್ಲಿಯೂ ಕಪ್ಪೆಗಳ ಸಂಶೋಧನೆಯನ್ನು ಅವರು ಮುಂದುವರೆಸಿದರು. 1957ರಲ್ಲಿ ಮರಳಿ ಕರ್ನಾಟಕ ಕಾಲೇಜಿಗೆ ವರ್ಗಾವಣೆಗೊಂಡು 1958ರಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದರು. 1969ರಿಂದ 1976ರವರೆಗೆ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಲೀಂ ಅಲಿ ಧಾರವಾಡಕ್ಕೆ ಬಂದು, ಜೇಮ್್ಸ ಸಂಗ್ರಹಿಸಿದ್ದ ಪಕ್ಷಿ ಪ್ರಭೇದಗಳನ್ನು ಬೆರಗುಗಣ್ಣಿಂದ ನೋಡಿದರು. ಪಕ್ಷಿ ಸಂಗ್ರಹಾಲಯದಲ್ಲಿದ್ದ ಮಲಬಾರ್ ಟ್ರಾಗನ್ ಎನ್ನುವ ಪಕ್ಷಿಯನ್ನು ನೋಡಿ ಅದರ ವಾಸ್ತವ್ಯದ ವಿವರಗಳನ್ನು ವಿಚಾರಿಸಿ, ‘ಧಾರವಾಡ ಪರಿಸರದಲ್ಲಿನ ಬಹಳ ನಮೂನೆಯ ಹಕ್ಕಿಗಳ ಬಗ್ಗೆ ಅಧ್ಯಯನ ಕೈಗೊಳ್ಳಲೇಬೇಕು. ಇದಕ್ಕೆ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಸಹಕಾರ ನೀಡಲಿದೆ’ ಎಂದರು.
ಇಷ್ಟಂದದ್ದೇ ತಡ, ನಿವೃತ್ತಿಯ ನಂತರ ಇಂದಿನ ಹಾವೇರಿ, ಗದಗ ಜಿಲ್ಲೆಗಳನ್ನೊಳಗೊಂಡ ಅವಿಭಜಿತ ಧಾರವಾಡ ಜಿಲ್ಲೆಯ 54 ಕೆರೆಗಳಿಗೆ ವಲಸೆ ಬರುವ 60 ಜಾತಿಯ ವಿಶಿಷ್ಟ ಹಕ್ಕಿಗಳನ್ನು ಪತ್ತೆ ಮಾಡುವ ಮೂಲಕ ಪಕ್ಷಿವೀಕ್ಷಕರ ಗೌರವಕ್ಕೆ ಪಾತ್ರರಾದರು. 98 ವರ್ಷಗಳ ತಮ್ಮ ಸಾರ್ಥಕ ಬದುಕಿನಲ್ಲಿ ಕನಿಷ್ಠ 70 ವರ್ಷಗಳನ್ನು ಸಂಶೋಧನೆ ಹಾಗೂ ಪ್ರವಾಸದಲ್ಲಿಯೇ ಕಳೆದರು.
2000 ಸೆಪ್ಟೆಂಬರ್ 22ರ ಮಳೆಗಾಲದ ದಿನ ಧಾರವಾಡದ ಹೆಬಿಕ್ ಸ್ಮಾರಕ ಚರ್ಚ್ಗೆ ಭೇಟಿ ನೀಡಿದ್ದ ಉತ್ತಂಗಿಯವರು ಬೆಳಿಗ್ಗೆ 9.45ರಿಂದ 10.30ರವರೆಗಿನ ಅವಧಿಯಲ್ಲಿ ಚರ್ಚ್ ಹೊರಭಾಗದಲ್ಲಿ 27 ಪ್ರಭೇದದ 80 ಪಾತರಗಿತ್ತಿಗಳನ್ನು ಗುರುತಿಸಿದರು.
ತಮ್ಮ 84ರ ಇಳಿವಯಸ್ಸಿನಲ್ಲಿ ಅವರು ಅಷ್ಟೊಂದು ಪಾತರಗಿತ್ತಿಗಳನ್ನು ಗುರುತಿಸಿದ್ದು, ಅವರ ಅಗಾಧ ಸ್ಮರಣ ಶಕ್ತಿಯ ದ್ಯೋತಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.