ADVERTISEMENT

ಜ್ಞಾನಪೀಠ ‘ನಾನ್‌ಸೆನ್ಸ್’ ಪ್ರಶಸ್ತಿ: ಕುಂವೀ ಕಿಡಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2014, 19:30 IST
Last Updated 8 ಫೆಬ್ರುವರಿ 2014, 19:30 IST

ಕೊಪ್ಪಳ: ‘ಜ್ಞಾನಪೀಠದಂಥ ನಾನ್‌ಸೆನ್ಸ್‌  (ಅಸಂಬದ್ಧ) ಪ್ರಶಸ್ತಿ ಇನ್ನೊಂದಿಲ್ಲ. ಒಂದಷ್ಟು ಅನು­ವಾದ ಕೃತಿ ಬರೆದರೆ ಅಥವಾ ಸ್ವಲ್ಪ ಲಾಬಿ ಮಾಡಿದರೆ  ಸುಲಭವಾಗಿ ಸಿಗು­ತ್ತದೆ. ಕನ್ನಡ ಸಾಹಿತ್ಯ ಕೇವಲ ಎಂಟು ಮಂದಿಗೆ (ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು) ಮಾತ್ರ ಸೀಮಿತವೇ?’ ಎಂದು ಸಾಹಿತಿ ಕುಂ.ವೀರಭದ್ರಪ್ಪ ಶನಿವಾರ ಇಲ್ಲಿ ಕಿಡಿಕಾರಿದರು.

ಸಾಹಿತ್ಯ ಭವನದಲ್ಲಿ ಸ್ವರ ಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ವಿವಿಧ ಸಂಘಟನೆಗಳ ಆಶ್ರಯ ದಲ್ಲಿ ಹಮ್ಮಿಕೊಳ್ಳಲಾದ ಕಲ್ಯಾಣ ಕರ್ನಾಟಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.
ಇದಕ್ಕೂ ಮುನ್ನ  ಪರಿಚಯ ಭಾಷಣ ಮಾಡಿದ ಡಾ.ವಿ.ಬಿ.ರಡ್ಡೇರ ಅವರು,  ‘ಕುಂವೀ ಅವರಿಗೂ ಜ್ಞಾನಪೀಠ ಪ್ರಶಸ್ತಿ ಸಿಗಬೇಕು’ ಎಂದು ಹೇಳಿದ್ದರು.  

ಅದಕ್ಕೆ ಪ್ರತಿ­ಕ್ರಿಯಿಸಿದ ಕುಂವೀ, ‘ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರು ಎಂದು ಬರೀ ಎಂಟು ಸಾಹಿತಿಗಳ ಭಾವ­ಚಿತ್ರ ಹಾಕು­ವುದು ಸರಿಯಲ್ಲ. ಕನ್ನಡಕ್ಕೆ ನೂರಾರು ಲೇಖ­ಕರ, ಜನರ ಕೊಡುಗೆಯಿದೆ. ಹಾಗಾಗಿ ಕನ್ನಡ ಸಾಹಿತ್ಯ ಎಂಬುದು ಇಷ್ಟು ಮಂದಿ­ಗೆ ಸೀಮಿತವಲ್ಲ. ನನಗೆ ಜ್ಞಾನಪೀಠ ಬಂದರೆ 10, ಹೋದರೆ 20. ನಮ್ಮ ಪಾಡಿ­ಗೆ ನಾವು ಬರೆಯುತ್ತಾ ಹೋಗ­ಬೇಕು. ಸಾಹಿತಿಯಿಂದ ಸಮಾಜದ ಗಾಯ­ಗಳಿಗೆ ಮುಲಾಮು ಹಚ್ಚುವ ಕಾರ್ಯ ಆಗಬೇಕು’ ಎಂದರು.

ಆಗ ಹೊಗಳಿಕೆ: ಕುಂವೀ ಅವರು ಇತ್ತೀಚೆಗೆ ಇದೇ ಸಾಹಿತ್ಯ ಭವನದಲ್ಲಿ ಡಾ.ಚಂದ್ರಶೇಖರ ಕಂಬಾರ ಕುರಿತ ‘ಕಂಬಾರರಿಗೆ ಜ್ಞಾನಪೀಠ’ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.