ADVERTISEMENT

ಜ.7ರಿಂದ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2013, 19:30 IST
Last Updated 10 ಅಕ್ಟೋಬರ್ 2013, 19:30 IST

ಬೆಂಗಳೂರು: ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 7, 8 ಮತ್ತು 9ರಂದು ಮಡಿಕೇರಿಯಲ್ಲಿ ನಡೆಯಲಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿ ದಿನಾಂಕಗಳನ್ನು ಪ್ರಕಟಿಸಿದ ಲೋಕೋ­ಪಯೋಗಿ ಸಚಿವ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಎಚ್‌.ಸಿ. ಮಹದೇವಪ್ಪ, ಸಮ್ಮೇಳ­ನಕ್ಕೆ ಅಂದಾಜು ರೂ2.5 ಕೋಟಿ ವೆಚ್ಚ­ವಾಗಲಿದೆ. ಸರ್ಕಾರ ಈಗಾಗಲೇ ಬಜೆಟ್‌ನಲ್ಲಿ ರೂ1 ಕೋಟಿ ಮೀಸಲಿಟ್ಟಿದೆ ಎಂದರು.

ಜ್ಞಾನಪೀಠ ಪ್ರಶಸ್ತಿ ಪಡೆದ ಎಲ್ಲ ಕನ್ನಡ ಸಾಹಿತಿಗಳನ್ನು ಹಾಗೂ ಇದು­ವರೆ­ಗಿನ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆ ವಹಿಸಿ­ದ್ದವರನ್ನು ಸಮ್ಮೇಳನಕ್ಕೆ ಆಹ್ವಾನಿ­ಸಲು ಉದ್ದೇಶಿ­ಸಲಾಗಿದೆ. ಸಮ್ಮೇಳನವನ್ನು ವ್ಯವ­ಸ್ಥಿತವಾಗಿ ಆಯೋಜಿಸಲು 28 ಉಪಸಮಿತಿಗಳನ್ನು ರಚಿಸಲಾಗಿದೆ. ಕೊಡ­ಗಿನ ಹೋಟೆಲ್‌­ಗಳು, ರೆಸಾರ್ಟ್‌­ಗಳು, ಹೋಮ್‌­ಸ್ಟೇಗಳು, ಕಲ್ಯಾಣ­ಮಂಟಪ­ಗಳು, ಎಲ್ಲ ವಿದ್ಯಾರ್ಥಿ ನಿಲಯಗಳು, ಶಿಕ್ಷಣ ಸಂಸ್ಥೆ­ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಸಿದ್ಧ­ತೆಗಳು ನಡೆದಿವೆ. ಕೊಡಗು ಜಿಲ್ಲೆಯ ಹೊಟೇಲ್‌ ಮಾಲೀಕರ ಸಂಘ ತಲಾ ಎರಡು ಕೊಠಡಿಗಳನ್ನು ಉಚಿತ­ವಾ­ಗಿ ನೀಡಲು ತೀರ್ಮಾನಿಸದೆ ಎಂದರು.

ಡಿ.15ರ ಒಳಗೆ ನೋಂದಾಯಿಸಿ
ಸಮ್ಮೇಳನಕ್ಕೆ ಪ್ರತಿನಿಧಿಗಳಾಗಿ ಬರಲಿಚ್ಛಿಸುವವರು ಡಿಸೆಂಬರ್‌ 15ರ ಒಳಗೆ ತಮ್ಮ ಹೆಸರುಗಳನ್ನು ನಿಗದಿತ ಶುಲ್ಕ ₨ 300 ನೀಡಿ ಆಯಾ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿ­ಷತ್‌ ಅಧ್ಯಕ್ಷ ಪುಂಡಲೀಕ ಹಾಲಂಬಿ ಕೋರಿದರು.

ಮಡಿಕೇರಿಯಲ್ಲಿ ಎಲ್ಲರಿಗೂ ವಸತಿ ಸೌಲಭ್ಯ ಕಲ್ಪಿಸಲು ಸಾಧ್ಯವಿಲ್ಲ. ಸಂಘಟ­ಕರು 3–4 ಸಾವಿರ ಮಂದಿಗೆ ಮಾತ್ರ ವಸತಿ ಸೌಲಭ್ಯ ಕಲ್ಪಿಸಲು ತಯಾರಿ ನಡೆಸಿ­ದ್ದಾರೆ. ಆದ್ದರಿಂದ ಹೆಸರು ನೋಂದಾಯಿಸಿಕೊಳ್ಳಲು ಡಿ.15 ಕೊನೆಯ ದಿನ­ವಾಗಿದೆ ಎಂದು ತಿಳಿಸಿದರು.

ಉಟೋಪಚಾರ ವ್ಯವಸ್ಥೆಯನ್ನು ಎಲ್ಲರಿಗೂ ಕಲ್ಪಿಸಲಾಗಿದೆ. ಆದರೆ, ಒಂದೇ ಜಾಗದಲ್ಲಿ ಎಲ್ಲರಿಗೂ ಇರು­ವುದಿಲ್ಲ. ನೋಂದಾಯಿಸಿದ ಪ್ರತಿನಿಧಿ­ಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಅವ್ಯವಸ್ಥೆ­ಯಾಗುವುದನ್ನು ತಡೆಯಲು ಕೂಪನ್‌ ನೀಡಲಾಗುವುದು ಎಂದು ವಿವರಿಸಿದರು.

ಪ್ರತಿನಿಧಿಗಳಾಗಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಮೂರು ದಿನ­ಗಳ ಹಾಜ­­ರಾತಿ­ಯನ್ನು ಗಮನಿಸಿ, ಸಮ್ಮೇಳನ ಮುಗಿದ ನಂತರ ಆಯಾ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮೂಲಕವೇ ಹಾಜರಾತಿ ಪತ್ರ ನೀಡಲಾಗುವುದು ಎಂದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಪಿ. ರಮೇಶ್‌ ಹಾಜರಿದ್ದರು.

ಸಮ್ಮೇಳನದ ಲಾಂಛನ
ಸಮ್ಮೇಳನದ ಲಾಂಛನವನ್ನು ಕಲಾ­­ವಿದ ಬಿ.ಆರ್‌. ಸತೀಶ್‌ ರೂಪಿ­ಸಿದ್ದು, ಕರ್ನಾಟಕ ನಕಾಶೆಯ ಒಳಗೆ ಕೊಡಗು ಜಿಲ್ಲೆಯ ನಕಾಶೆಯನ್ನು ರಚಿ­ಸಲಾಗಿದೆ.

ರಾಜ್ಯದ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿ­ಯಲ್ಲಿನ ಪವಿತ್ರ ಕುಂಡಿಕೆಯ ಮೇಲೆ ಕೊಡಗಿನ ಕುಲದೇವತೆ ಕಾವೇರಿ ತಾಯಿ­ಯ ವಿಗ್ರಹ ಹಾಗೂ ನಕಾ­ಶೆಯ ಒಳಭಾಗದಲ್ಲಿ ಮಡಿಕೇರಿಯ ಪ್ರವಾಸಿ ಕೇಂದ್ರ ರಾಜಾಸೀಟ್‌ನ್ನು ಚಿತ್ರಿ­­ಸಲಾಗಿದೆ.

ಸಾಹಿತ್ಯ ಸಮ್ಮೇಳನ ಬಿಂಬಿ­ಸುವ ಪುಸ್ತಕ ಹಾಗೂ ಲೇಖ­ನಿ, ಕೊಡಗಿನ ಪ್ರವಾಸಿಗರ ಕೇಂದ್ರ ಪರ್ವತ ಮಾಂದಲ್‌ಪಟ್ಟಿ, ಅಬ್ಬಿ­ಜಲ­ಪಾತ, ಪ್ರಮುಖ ಬೆಳೆಗಳಾದ ಕಾಫಿ, ಏಲಕ್ಕಿ, ಕಿತ್ತಳೆ ಹಾಗೂ ಕರಿ­ಮೆಣಸು ಚಿತ್ರಗಳನ್ನು ಈ ಲಾಂಛನ ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.