ADVERTISEMENT

ಟಿಕೆಟ್‌ ಕೈ ತಪ್ಪಿದ ಶಾಸಕರಿಗೆ ಮತ್ತೆ ಮಣೆ

ಭುಗಿಲೆದ್ದ ಅಸಮಾಧಾನಕ್ಕೆ ಮಣಿದ ಕಾಂಗ್ರೆಸ್‌ ನಾಯಕರು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 20:00 IST
Last Updated 19 ಏಪ್ರಿಲ್ 2018, 20:00 IST

ಬೆಂಗಳೂರು: ಟಿಕೆಟ್‌ ಕೈ ತಪ್ಪಿದ ಶಾಸಕರು ಮತ್ತು ಬೆಂಬಲಿಗರ ಅಸಮಾಧಾನಕ್ಕೆ ಮಣಿದಿರುವ ಕಾಂಗ್ರೆಸ್‌, ಈ ಪೈಕಿ ಕೆಲವರಿಗೆ ಹಾಲಿ ಕ್ಷೇತ್ರಗಳಲ್ಲೇ ಟಿಕೆಟ್‌ ನೀಡಲು ತೀರ್ಮಾನಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಗುರುವಾರ ರಾತ್ರಿ ಈ ಕುರಿತು ಚರ್ಚೆ ನಡೆಸಿದ್ದಾರೆ.

ಈಗಾಗಲೇ ಟಿಕೆಟ್‌ ಘೋಷಿಸಿದ್ದ ಜಗಳೂರು ಮತ್ತು ತಿಪಟೂರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಿಸಲು ಹಿರಿಯ ನಾಯಕರು ಚಿಂತನೆ ನಡೆಸಿದ್ದಾರೆ. ಟಿಕೆಟ್‌ ಹಂಚಿಕೆ ಗೊಂದಲ ಮುಂದುವರಿದಿರುವ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಜೊತೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ.

ADVERTISEMENT

ಜಗಳೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಎಚ್‌.ಪಿ. ರಾಜೇಶ್‌ ಅವರಿಗೇ ಟಿಕೆಟ್‌ ನೀಡಲು ತೀರ್ಮಾನಿಸಲಾಗಿದೆ. ತಿಪಟೂರು ಕ್ಷೇತ್ರದ ಶಾಸಕ ಕೆ. ಷಡಕ್ಷರಿ ತೀವ್ರ ಅಸಮಾಧಾನಗೊಂಡಿದ್ದು, ಅವರ ಬೆಂಬಲಿಗರು ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಷಡಕ್ಷರಿ ಅವರಿಗೇ ಟಿಕೆಟ್‌ ನೀಡುವ ಬಗ್ಗೆ ಮರು ಪರಿಶೀಲಿಸುವ ಸಾಧ್ಯತೆ ಇದೆ.

ಶಾಂತಿನಗರ ಕ್ಷೇತ್ರದಿಂದ ಶಾಸಕ ಎನ್‌.ಎ. ಹ್ಯಾರಿಸ್, ರಾಯಚೂರಿನಲ್ಲಿ ಹಿರಿಯ ಮುಖಂಡ ಜಾಫರ್ ಷರೀಫ್ ಅಳಿಯ ಯಾಸೀನ್, ಕಿತ್ತೂರಿನಲ್ಲಿ ಡಿ.ಬಿ. ಇನಾಮದಾರ ಅವರ ದೂರದ ಸಂಬಂಧಿ ಬಾಳಾಸಾಹೇಬ್ ಪಾಟೀಲ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಚರ್ಚೆ ನಡೆದಿದೆ.

ಬಾದಾಮಿ ಕ್ಷೇತ್ರದಲ್ಲಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅವರನ್ನು ಬಿಟ್ಟು ದೇವರಾಜ ಪಾಟೀಲ ಅವರಿಗೆ ಪಕ್ಷ ಟಿಕೆಟ್‌ ಘೋಷಿಸಿದೆ. ಇದರಿಂದ ಚಿಮ್ಮನಕಟ್ಟಿ ಅಸಮಾಧಾನಗೊಂಡಿದ್ದಾರೆ. ಅಲ್ಲದೆ, ಚಾಮುಂಡೇಶ್ವರಿ ಕ್ಷೇತ್ರದ ಜೊತೆ ಬಾದಾಮಿಯಿಂದಲೂ ಸ್ಪರ್ಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ತೀವ್ರ ಒತ್ತಡ ಬಂದಿದೆ. ಹೀಗಾಗಿ, ಈ ಕುರಿತ ತೀರ್ಮಾನವನ್ನು ಮುಖ್ಯಮಂತ್ರಿ ವಿವೇಚನೆಗೆ ಬಿಡಲಾಗಿದೆ.

‘ಬಾದಾಮಿಯಿಂದ ನೀವು ನಿಲ್ಲುವುದಾರೆ ನಮ್ಮ ಆಕ್ಷೇಪ ಇಲ್ಲ‌. ನೀವು ನಿಲ್ಲದಿದ್ದರೆ ಚಿಮ್ಮನಕಟ್ಟಿ ಅಥವಾ ದೇವರಾಜ ಪಾಟೀಲರ ಪೈಕಿ ಯಾರಿಗೆ ಟಿಕೆಟ್‌ ನೀಡಬೇಕು ಎಂಬುದನ್ನು ನೀವೇ ನಿರ್ಧರಿಸಿ’ ಎಂದು ಮುಖ್ಯಮಂತ್ರಿ ಅವರಿಗೆ ವೇಣುಗೋಪಾಲ್‌ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.

ಪದ್ಮನಾಭ ನಗರ ಕ್ಷೇತ್ರಕ್ಕೆ ಗುರಪ್ಪ ನಾಯ್ಡು ಹೆಸರನ್ನು ಪಕ್ಷ ಪ್ರಕಟಿಸಿದೆ. ಈಕ್ಷೇತ್ರದ ಆಕಾಂಕ್ಷಿ ಎಂ. ಶ್ರೀನಿವಾಸ ಅವರಿಗೆ ಟಿಕೆಟ್‌ ನೀಡುವಂತೆ ತೀವ್ರ ಒತ್ತಡ ಉಂಟಾಗಿದ್ದು, ಈ ಬಗ್ಗೆಯೂ ಸಭೆಯಲ್ಲಿ ವಿಷಯ ಪ್ರಸ್ತಾವವಾಗಿದೆ.

ಮಲ್ಲೇಶ್ವರ ಕ್ಷೇತ್ರದಿಂದ ಸಚಿವ ಎಂ.ಆರ್‌. ಸೀತಾರಾಂ ಸ್ಪರ್ಧಿಸುವ ಬಗ್ಗೆ ಇನ್ನೂ ನಿಲುವು ಸ್ಪಷ್ಟಪಡಿಸಿಲ್ಲ. ಅಲ್ಲದೆ, ನಾಗಠಾಣ, ಸಿಂಧಗಿ ಕ್ಷೇತ್ರಗಳಿಗೂ ಪಕ್ಷ ಟಿಕೆಟ್‌ ಘೋಷಿಸಿಲ್ಲ. ಶೀಘ್ರದಲ್ಲೇ ಈ ಕ್ಷೇತ್ರಗಳಿಗೂ ಟಿಕೆಟ್‌ ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಜಗಳೂರು ಕ್ಷೇತ್ರಕ್ಕೆ ಟಿಕೆಟ್‌ ಘೋಷಿಸಿದ ಬಳಿಕ ಇದೀಗ ಬದಲಿಸಲು ತೀರ್ಮಾನಿಸಿರುವ ಬಗ್ಗೆ ಪುಷ್ಪಾ, ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತ
ಪಡಿಸಿದ್ದಾರೆ.

ಜಗಳೂರು ಕ್ಷೇತ್ರಕ್ಕೆ ಟಿಕೆಟ್‌ ಘೋಷಿಸಿದ ಬಳಿಕ ಇದೀಗ ಬದಲಿಸಲು ತೀರ್ಮಾನಿಸಿರುವ ಬಗ್ಗೆ ಪುಷ್ಪಾ, ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ಎಚ್‌.ಪಿ. ರಾಜೇಶ್ ಅವರಿಗೆ ಮತ್ತೆ ಟಿಕೆಟ್‌ ನೀಡಲು ತೀರ್ಮಾನಿಸಿರುವುದರಿಂದ ನೋವಾಗಿದೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತೆ. ನಾನು ಗೆಲ್ಲುವ ಅಭ್ಯರ್ಥಿ. ಕೊನೆ ಕ್ಷಣದಲ್ಲಿ ಅವಕಾಶ ತಪ್ಪಿಸಿದ್ದು ಸರಿಯಲ್ಲ. ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತೇನೆ. ಬೆಂಬಲಿಗರ ಜೊತೆ ಚರ್ಚಿಸಿ ಮುಂದಿನ ನಿರ್ಧಾರತೆಗೆದುಕೊಳ್ಳುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.