ಬೆಂಗಳೂರು: `ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಎಲ್ಲ ಕೊಳವೆ ಬಾವಿಗಳಿಗೆ ಈ ವರ್ಷದಲ್ಲೇ ವಿದ್ಯುತ್ ಸಂಪರ್ಕ, ಟ್ರಾನ್ಸ್ಫಾರ್ಮರ್ಗಳ (ಟಿ.ಸಿ) ಕೊರತೆ ನೀಗಿಸಲು ತಾಲ್ಲೂಕು ಮಟ್ಟದಲ್ಲಿ `ಟಿ.ಸಿ. ಬ್ಯಾಂಕ್' ಸ್ಥಾಪನೆ, ಬಾಕಿ ಇರುವ ನೀರಾವರಿ ಯೋಜನೆಗಳನ್ನು ಐದು ವರ್ಷಗಳಲ್ಲಿ ಪೂರ್ಣ'.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಗೆ ವಿಧಾನಸಭೆಯಲ್ಲಿ ಬುಧವಾರ ಉತ್ತರ ನೀಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಅಂಶಗಳನ್ನು ಪ್ರಕಟಿಸಿದರು.
ಪರಿಶಿಷ್ಟರು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಬಡ ರೈತರ ಜಮೀನುಗಳಲ್ಲಿ ಸರ್ಕಾರವೇ ಕೊಳವೆ ಬಾವಿ ಕೊರೆಯಲು ಅನುದಾನ ನೀಡಿತ್ತು. ಆದರೆ, ವಿದ್ಯುತ್ ಸಂಪರ್ಕ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಬಾಕಿ ಇರುವ ಸುಮಾರು 31 ಸಾವಿರ ಕೊಳವೆ ಬಾವಿಗಳಿಗೆ ಈ ವರ್ಷದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದರು.
ಪದೇ ಪದೇ ಟ್ರಾನ್ಸ್ಫಾರ್ಮರ್ಗಳು ಕೈಕೊಡುವುದರಿಂದ ಕೃಷಿಗೆ ಮಾತ್ರವಲ್ಲದೆ, ಕುಡಿಯುವ ನೀರು ಸರಬರಾಜಿಗೂ ತೊಂದರೆಯಾಗಿದೆ. ಇದನ್ನು ಸರಿ ಮಾಡುವ ಸಲುವಾಗಿ ತಾಲ್ಲೂಕು ಮಟ್ಟದಲ್ಲಿ `ಟಿ.ಸಿ. ಬ್ಯಾಂಕ್' ಸ್ಥಾಪಿಸಲಾಗುವುದು. ದುರಸ್ತಿಗೆ ಬಂದ ತಕ್ಷಣ ಅವುಗಳನ್ನು ಬದಲಿಸಲು ಈ ಬ್ಯಾಂಕ್ ಸಹಕಾರಿಯಾಗಲಿದೆ ಎಂದರು.
ಸರ್ಕಾರಿ ಸ್ವಾಮ್ಯದ ಕರ್ನಾಟಕ ವಿದ್ಯುತ್ ಕಂಪೆನಿಯಿಂದ ಟಿ.ಸಿ.ಗಳನ್ನು ಖರೀದಿಸುವುದಕ್ಕೆ ಪಾರದರ್ಶಕ ಕಾಯ್ದೆಯಡಿ ವಿನಾಯಿತಿ ನೀಡಲಾಗಿದೆ. ಅಗತ್ಯ ಬಿದ್ದಾಗ ವಿದ್ಯುತ್ ಸರಬರಾಜು ಕಂಪೆನಿಗಳೇ ಟಿ.ಸಿ.ಗಳನ್ನು ನೇರವಾಗಿ ಖರೀದಿಸಬಹುದು ಎಂದು ಅವರು ಹೇಳಿದರು.
ರಾಜ್ಯದಲ್ಲಿ 72 ಟಿ.ಸಿ. ರಿಪೇರಿ ಕೇಂದ್ರಗಳಿದ್ದು, ಅವುಗಳನ್ನು ನೂರಕ್ಕೆ ಹೆಚ್ಚಿಸಲಾಗುವುದು. ಮುಂದಿನ ದಿನಗಳಲ್ಲಿ ಅವುಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶ ಇದೆ. ಹೆಚ್ಚು ಸಮಸ್ಯೆ ಇರುವ ಕಡೆ ಈ ರಿಪೇರಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ವಿವರಿಸಿದರು.
ನೀರಾವರಿಗೆ ಆದ್ಯತೆ: ಎತ್ತಿನಹೊಳೆ, ಕಾವೇರಿ ಮತ್ತು ಕೃಷ್ಣಾ ಕೊಳ್ಳ ಸೇರಿದಂತೆ ಬಾಕಿ ಇರುವ ಎಲ್ಲ ನೀರಾವರಿ ಯೋಜನೆಗಳನ್ನು ಐದು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು. ಈ ಸಲುವಾಗಿ ಪ್ರತಿ ವರ್ಷ ಕನಿಷ್ಠ 10 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ಹೇಳಿದರು.
ಕುಡಿಯುವ ನೀರು: ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಕೊಳವೆ ಬಾವಿ ಕೊರೆಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಬಳಿ 38 ಕೋಟಿ ರೂಪಾಯಿ ಅನುದಾನ ಇದೆ. ಇನ್ನೂ ಹೆಚ್ಚಿನ ಅನುದಾನ ಬೇಕಿದ್ದರೆ ತಕ್ಷಣ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ.
ಶಾಸಕರ ಅಧ್ಯಕ್ಷತೆಯ ಕಾರ್ಯಪಡೆಗಳು ಸಭೆ ಸೇರಿ, ಕೊಳವೆ ಬಾವಿ ಕೊರೆಸುವ ಸಂಬಂಧ ತೀರ್ಮಾನ ತೆಗೆದುಕೊಳ್ಳಬೇಕು ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.