ADVERTISEMENT

ಡಿಸೋಜ ಕ್ಷಮೆಗೆ ಶಾಸಕರ ಪಟ್ಟು

ಕಸ್ತೂರಿ ರಂಗನ್‌ ವರದಿಗೆ ಒಲವು: ಕೊಡವರ ಭಾವನೆಗೆ ಧಕ್ಕೆ ಆರೋಪ

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 20:00 IST
Last Updated 8 ಜನವರಿ 2014, 20:00 IST
ಕಸ್ತೂರಿ ರಂಗನ್‌ ವರದಿ ಅನುಷ್ಠಾನಕ್ಕೆ ಒಲವು ತೋರಿದ  ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ.ಡಿಸೋಜ  ಅವರನ್ನು ವೇದಿಕೆಯಲ್ಲೇ ಭೇಟಿಯಾದ ಜಿಲ್ಲಾ ಬಿಜೆಪಿ ವಕ್ತಾರ ಅಡ್ಡಂಡ ಕಾರ್ಯಪ್ಪ ಹಾಗೂ ಇತರ ಕಾರ್ಯಕರ್ತರು ಕ್ಷಮೆ ಯಾಚಿಸುವಂತೆ ಒತ್ತಾಯಿಸಿದರು.  	ಪ್ರಜಾವಾಣಿ ಚಿತ್ರ: ಆನಂದ ಬಕ್ಷಿ.
ಕಸ್ತೂರಿ ರಂಗನ್‌ ವರದಿ ಅನುಷ್ಠಾನಕ್ಕೆ ಒಲವು ತೋರಿದ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ.ಡಿಸೋಜ ಅವರನ್ನು ವೇದಿಕೆಯಲ್ಲೇ ಭೇಟಿಯಾದ ಜಿಲ್ಲಾ ಬಿಜೆಪಿ ವಕ್ತಾರ ಅಡ್ಡಂಡ ಕಾರ್ಯಪ್ಪ ಹಾಗೂ ಇತರ ಕಾರ್ಯಕರ್ತರು ಕ್ಷಮೆ ಯಾಚಿಸುವಂತೆ ಒತ್ತಾಯಿಸಿದರು. ಪ್ರಜಾವಾಣಿ ಚಿತ್ರ: ಆನಂದ ಬಕ್ಷಿ.   

ಮಡಿಕೇರಿ: ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ.ಡಿಸೋಜ ಅವರು ಕೊಡವರ ಭಾವನೆಗೆ ನೋವು ಉಂಟು ಮಾಡಿದ್ದು ತಕ್ಷಣವೇ ಅವರು ಕ್ಷಮೆ ಯಾಚಿಸಬೇಕು ಎಂದು ಕೊಡಗಿನ ಇಬ್ಬರು ಶಾಸಕರು ಒತ್ತಾಯಿಸಿದ್ದಾರೆ.

ಡಿಸೋಜ ಅವರು ಕಸ್ತೂರಿ ರಂಗನ್‌ ವರದಿ ಯನ್ನು ಅನುಷ್ಠಾನ­ಗೊಳಿಸ­ಬೇಕೆನ್ನುವ ಅರ್ಥ ದಲ್ಲಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದ್ದಾರೆ. ಅವರು ಬೇಷರತ್‌ ಕ್ಷಮೆಯಾಚಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್‌ ಬುಧವಾರ ಇಲ್ಲಿ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಘಟ್ಟದ ವ್ಯಾಪ್ತಿಯಿಂದ 10 ಕಿ.ಮೀ ದೂರದವರೆಗೆ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳದಂತೆ ವರದಿಯು ಶಿಫಾರಸು ಮಾಡಿದೆ. ಈ ವರದಿ ಅನುಷ್ಠಾನ­ವಾದರೆ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಭಿ ವೃದ್ಧಿ ಕೆಲಸಗಳಾಗುವುದಿಲ್ಲ ಎಂದು ಹೇಳಿದರು.

‘ಈ ವರದಿಯನ್ನು ಅನುಷ್ಠಾನ­ಗೊಳಿಸದಂತೆ ಜಿಲ್ಲೆಯ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಇದನ್ನು ನಾವು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಆದರೆ, ಇದನ್ನು ಅರ್ಥೈಸಿ­ಕೊಳ್ಳದ ನಾ. ಡಿಸೋಜ  ಅವರು, ವರದಿ ಜಾರಿಯಾ ಗುವು ದನ್ನು ನಾವು (ರಾಜಕಾರಣಿಗಳು) ಸ್ವಾರ್ಥ ಸಾಧನೆ­ಗಾಗಿ ವಿರೋಧಿಸಿದ್ದೆವು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಗುರುವಾರ ಅವರು ಮಾಡ ಲಿ­ರುವ ಸಮಾರೋಪ ಭಾಷಣ­ದಲ್ಲಿ ಇದಕ್ಕೆ ಕ್ಷಮೆಯಾಚಿಸ­ಬೇಕು’ ಎಂದು ಒತ್ತಾಯಿಸಿದರು.

‘ನಾ. ಡಿಸೋಜ ಅವರು ಅಧ್ಯಕ್ಷೀಯ ಭಾಷಣ ಮಾಡುತ್ತಿರುವಾಗಲೇ ನಾವು ವಿರೋಧಿಸ­ಬೇಕೆಂದು ತೀರ್ಮಾನಿಸಿದ್ದೆವು. ಆದರೆ, ಕನ್ನಡ ಸಮ್ಮೇಳನ ನಡೆ­ಯುತ್ತಿರುವುದರಿಂದ ತೊಂದರೆ­ಯಾಗ­­ಬಾರದೆಂದು ಹಾಗೂ ಸಮ್ಮೇಳನಾ­ಧ್ಯಕ್ಷ ರಿಗೆ ಅಗೌರವ ತೋರಬಾರ ದೆಂದು ಸುಮ್ಮ ನಾದೆವು’ ಎಂದರು.

ನಿರ್ಣಯಕ್ಕೆ ಒತ್ತಾಯ: ಕಸ್ತೂರಿ ರಂಗನ್‌ ವರದಿ ಅನು­ಷ್ಠಾನಕ್ಕೆ ವಿರೋಧ ವ್ಯಕ್ತಪಡಿಸುವ ನಿರ್ಣಯ ವನ್ನು ಸಮ್ಮೇಳನದಲ್ಲಿ ಕೈಗೊಳ್ಳಬೇಕು ಹಾಗೂ ಸಮ್ಮೇಳನಾ­ಧ್ಯಕ್ಷರ ಭಾಷಣದಲ್ಲಿ ಉಲ್ಲೇಖವಾ­ಗಿರುವ ಮೇಲಿನ ಸಾಲುಗಳನ್ನು ತೆಗೆದು­ಹಾಕಬೇಕು ಎಂದು ಅವರು ಒತ್ತಾಯಿ­ಸಿದರು.

‘ವರದಿಯನ್ನು ಅನುಷ್ಠಾನ­ಗೊಳಿಸ­ದಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಸಮ್ಮೇಳನದ ದಿನ ಕೊಡಗು ಬಂದ್‌ಗೆ ಕರೆ ನೀಡಲಾಗಿತ್ತು. ಆದರೆ, ವರದಿ ಅನುಷ್ಠಾನ ಕುರಿತಂತೆ ಸ್ಥಳೀಯರ ಅಭಿಪ್ರಾಯ ಪಡೆದ ನಂತರ ನಿರ್ಣಯ ಕೈಗೊಳ್ಳು ವುದಾಗಿ ಮುಖ್ಯಮಂತ್ರಿ ಅವರು ಭರ ವಸೆ ನೀಡಿದ್ದರಿಂದ ಬಂದ್‌ ಕರೆಯನ್ನು ವಾಪಸ್‌ ಪಡೆಯಲಾಗಿತ್ತು’ ಎಂದು ಅವರು ಸ್ಮರಿಸಿದರು.

ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಅಡ್ಡಂಡ ಕಾರ್ಯಪ್ಪ ಮಾತನಾಡಿ, ನಾ.ಡಿ ಕ್ಷಮೆ­ಯಾಚಿಸದಿದ್ದರೆ  ಯಾವ ರೀತಿ ಹೋರಾಟ ಮಾಡ ಬೇಕೆಂದು ನಿರ್ಧರಿಸಲಾಗುವುದು ಹೇಳಿದರು. ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಮುಗಿದ ತಕ್ಷಣ ಮುಖ್ಯವೇದಿಕೆ ಪ್ರವೇಶಿಸಿದ ಬೋಪಣ್ಣ, ಅಪ್ಪಚ್ಚು ರಂಜನ್‌ ಮೈಕ್‌ನಲ್ಲಿ ಸುದ್ದಿಗೋಷ್ಠಿ­ಯಲ್ಲಿ ಮಾಡಿದ ಒತ್ತಾಯವನ್ನೇ ಪುನರುಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.