ADVERTISEMENT

ತನಿಖೆ ಅರಣ್ಯ ಸಂಚಾರಿ ಜಾಗೃತ ದಳಕ್ಕೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2011, 19:00 IST
Last Updated 31 ಮಾರ್ಚ್ 2011, 19:00 IST
ತನಿಖೆ ಅರಣ್ಯ ಸಂಚಾರಿ ಜಾಗೃತ ದಳಕ್ಕೆ
ತನಿಖೆ ಅರಣ್ಯ ಸಂಚಾರಿ ಜಾಗೃತ ದಳಕ್ಕೆ   

ಶಿವಮೊಗ್ಗ: ಡಿಐಜಿ ಸಿಐಡಿ ಎಸ್. ಮುರುಗನ್ ಅಕ್ರಮ ನಾಟಾ ಸಂಗ್ರಹದ ಪ್ರಕರಣದ ತನಿಖೆಯನ್ನು ಅರಣ್ಯ ಸಂಚಾರಿ ಜಾಗೃತ ದಳಕ್ಕೆ ಅರಣ್ಯ ಸಂರಕ್ಷಣಾಧಿಕಾರಿ ವಹಿಸಿದ್ದಾರೆ.

ಅರಣ್ಯ ಸಂಚಾರಿ ಜಾಗೃತ ದಳದ ಅಧಿಕಾರಿ ಕುಮಾರ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ, ಈ ಬಗ್ಗೆ ತನಿಖೆ ನಡೆಸುವಂತೆ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್‌ಕುಮಾರ್ ಆದೇಶಿಸಿದ್ದಾರೆ.

ಡಿಐಜಿ ಸಿಐಡಿ ಎಸ್. ಮುರುಗನ್ ಅವರ ಶಿವಮೊಗ್ಗದ ಸರ್ಕಾರಿ ನಿವಾಸದ ಮೇಲೆ ಬುಧವಾರ ದಾಳಿ ನಡೆಸಿದ್ದ ಅರಣ್ಯ ಮತ್ತು ಲೋಕಾಯುಕ್ತ ಅಧಿಕಾರಿಗಳ ತಂಡ ಪರವಾನಗಿ ಇಲ್ಲದ ಸುಮಾರು 3,17,450 ರೂ ಮೌಲ್ಯದ 126.98 ಘನ ಅಡಿ ಸಾಗುವಾನಿ ನಾಟಾ ಪತ್ತೆ ಹಚ್ಚಿದೆ.

ಗುರುವಾರ ಸಂಜೆವರೆಗೂ ನಡೆದ ಸುದೀರ್ಘ ಕಾರ್ಯಾಚರಣೆಯಲ್ಲಿ 52.35 ಘನ ಅಡಿ ನಂದಿ, 3.250 ಘನ ಮೀಟರ್ ಹೆಬ್ಬಲಸಿನ ನಾಟಾವನ್ನು ಪತ್ತೆ ಮಾಡಲಾಗಿದೆ.

ಆದರೆ ಇದಕ್ಕೆ ಪರವಾನಗಿ ಇದ್ದು, ಇದನ್ನು ಹಾವೇರಿಯ ಹಿರೇಕೆರೂರು ಅರಣ್ಯ ವಲಯದ ಪರವಾನಗಿ ಎಂದು ತೋರಿಸಿರುವ ಬಗ್ಗೆ ತನಿಖಾ ತಂಡ ಸಂಶಯ ವ್ಯಕ್ತಪಡಿಸಿದೆ.

ಅಲ್ಲದೇ, ಮುರುಗನ್ ಪತ್ನಿ ಶುಭಾ ಅವರು ಪರಿಶೀಲನೆ ಸಂದರ್ಭದಲ್ಲಿ ಹಾಜರುಪಡಿಸಿದ ನಾಲ್ಕು ಪರವಾನಗಿಗಳು ಅಧಿಕೃತವೇ ಅಥವಾ ಅಲ್ಲವೇ ಎಂಬ ಬಗ್ಗೆಯೂ ತನಿಖಾ ತಂಡ ಅನುಮಾನ ವ್ಯಕ್ತಪಡಿಸಿದೆ.

‘ತನಿಖಾ ತಂಡ 20 ಪುಟದ ವರದಿ ನೀಡಿದೆ. ಈ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು. ಮುಂದಿನ ಕಾನೂನು ಕ್ರಮಕ್ಕೆ ಸಂಬಂಧಪಟ್ಟ ವಲಯ ಅರಣ್ಯ ಅಧಿಕಾರಿಗಳಿಗೆ ಕಳುಹಿಸಲಾಗುವುದು’ ಎಂದು ಬ್ರಿಜೇಶ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.