ADVERTISEMENT

ತಾಳಗುಂದ: ಉತ್ಖನನದಲ್ಲಿ ಚಂದ್ರಶಿಲೆ ಮೆಟ್ಟಿಲು ಪತ್ತೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 19:30 IST
Last Updated 14 ಡಿಸೆಂಬರ್ 2013, 19:30 IST

ಶಿರಾಳಕೊಪ್ಪ: ಐತಿಹಾಸಿಕ ಗ್ರಾಮ ತಾಳಗುಂದದಲ್ಲಿ ಎರಡನೆ ಹಂತದ ಪ್ರಾಯೋ­ಗಿಕ ಉತ್ಖನನ ಕಾರ್ಯ ಭರದಿಂದ ಸಾಗಿದೆ.
ಈ ವೇಳೆ ಕಂಚಿನ ಪೂಜಾ ಸಾಮಗ್ರಿ­ಗಳಾದ ಘಂಟೆ, ಆರತಿ ತಟ್ಟೆ, ದೀಪ, ಧೂಪಾ­ರತಿ, ಹಣತೆ, ಭಗ್ನವಾದ ವಿಷ್ಣು­ಮೂರ್ತಿ, ಶಾಸನಗಳ ತುಣುಕುಗಳು, ಸುಂದರ ಕಲಾಕೃತಿ ಹೊಂದಿರುವ ಹೆಂಚು, ವಿಶೇಷವಾದ ದೊಡ್ಡ ಸುಣ್ಣದ ಕಲ್ಲು ಸಿಕ್ಕಿದ್ದು ಅದನ್ನು ಭಗ್ನವಾಗಿರುವ ಶಿವಲಿಂಗವಿರಬಹುದು ಎಂದು ಅಂದಾಜಿಸಲಾಗಿದೆ.

ಚಂದ್ರಶಿಲೆಯ ಚಂದ್ರಾಕೃತಿಯ ಮೆಟ್ಟಿ­ಲು­­ಗಳು ನೆಲದಿಂದ ಸುಮಾರು 3 ಅಡಿ ಆಳ­ದಲ್ಲಿ ಲಭ್ಯವಾಗಿದ್ದು ಉತ್ಖನನ ಕಾರ್ಯ­­ಕ್ಕೆ ಮತ್ತಷ್ಟು ಸ್ಫೂರ್ತಿ ದೊರಕಿದೆ.

ಕನ್ನಡದ ಮೊದಲ ದೊರೆ ಮಯೂರ ವರ್ಮನ ಮೂಲ ನೆಲೆ, ಕನ್ನಡದ ಮೊದಲ ವಿದ್ಯಾಕೇಂದ್ರ ಎಂದು ಹೇಳಲಾ­ಗಿ­ರುವ ಸಾವಿರಾರು ವರ್ಷಗಳ ಇತಿಹಾಸ­ವಿರುವ ತಾಳಗುಂದ ಗ್ರಾಮದ ಪ್ರಣವೇಶ್ವರ ದೇವಾಲಯದ ಉತ್ಖನನ ಕಾರ್ಯ ನಡೆಯಬೇಕು ಎಂದು ಈ ಭಾಗದ ಜನರು  ಪುರಾತತ್ವ ಇಲಾಖೆಗೆ ಹಲವಾರು ಬಾರಿ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ್ದ ಪುರಾತತ್ವ ಇಲಾಖೆ ಫೆಬ್ರುವರಿ ತಿಂಗಳಿನಲ್ಲಿ ಪ್ರಾಯೋಗಿಕ ಉತ್ಖನನ ನಡೆಸಿತ್ತು.

ಆ ಸಂದರ್ಭದಲ್ಲಿ ಗಂಗರ ಕಾಲದ 13 ಚಿನ್ನದ ನಾಣ್ಯಗಳು, ಖಳಚೂರರ ತಾಮ್ರದ ತಟ್ಟೆಗಳು ಲಭಿಸಿದ್ದವು.
ಈ ಬಗ್ಗೆ ರಾಜ್ಯ  ಪುರಾತತ್ವ ಶಾಸ್ತ್ರಜ್ಞರ ಉಪ ಮೇಲ್ವಿಚಾರಕ  ಕೇಶವ ಶರ್ಮ ಮಾತನಾಡಿ, ತಾಳಗುಂದದಲ್ಲಿ ಹುದುಗಿ ಹೋಗಿರುವ ಇತಿಹಾಸ ಹೊರಗೆಡವಲು ಪುರಾತತ್ವ ಇಲಾಖೆ ಮುಂದಾಗಿದ್ದು. ಉತ್ಖನನ ಕಾರ್ಯ ಪೂರ್ಣವಾದ ನಂತರವೇ ಇಲ್ಲಿಯ ಇತಿಹಾಸದ ಸ್ಪಷ್ಟ ಮಾಹಿತಿ ಲಭಿಸುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.