ಹುಬ್ಬಳ್ಳಿ: ಮಣ್ಣು, ಕಲ್ಲಿದ್ದಲು ಹಾಗೂ ಮ್ಯಾಂಗನೀಸ್ ಮಿಶ್ರಿತ ತ್ಯಾಜ್ಯವನ್ನು ಸುರಿದು ದೊಡ್ಡ ಗುಡ್ಡೆ ಹಾಕಿದ್ದ ಜಾಗದಲ್ಲಿನ ಖನಿಜಯುಕ್ತ ಕಲ್ಲುಗಳನ್ನು ಆಯುತ್ತಿದ್ದ ಕೂಲಿಕಾರರ ಮೇಲೆ ಮಣ್ಣಿನ ಗುಡ್ಡ ಕುಸಿದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಮಂಟೂರು ರಸ್ತೆಯಲ್ಲಿ ಬುಧವಾರ ಸಂಭವಿಸಿದೆ.
ಮೃತ ಮಹಿಳೆಯರನ್ನು ಸ್ಥಳೀಯ ಗಾಂಧಿವಾಡದ ಏಕತಾ ಕಾಲೊನಿ ನಿವಾಸಿ ಪದ್ಮಾವತಿ ತಲಪಾಟಿ (54) ಹಾಗೂ ಮೌಲಾಲಿ ಜೋಪಡಿಯ ಚನ್ನಮ್ಮ ಅಸ್ತೋಟಿ (42) ಎಂದು ಗುರುತಿಸಲಾಗಿದೆ.
ಬೆಳಿಗ್ಗೆ 9.30ರ ಸುಮಾರಿಗೆ ಒಟ್ಟು ಆರು ಮಹಿಳೆಯರು ಮಣ್ಣು, ಕಲ್ಲಿದ್ದಲು ಹಾಗೂ ಮ್ಯಾಂಗನೀಸ್ ಮಿಶ್ರಿತ ತ್ಯಾಜ್ಯವನ್ನು ಸುರಿದಿದ್ದ ದೊಡ್ಡ ಗುಡ್ಡೆಯಲ್ಲಿರುವ ಖನಿಜಯುಕ್ತ ಕಲ್ಲುಗಳನ್ನು ಆಯ್ದುಕೊಳ್ಳುವ ಕಾಯಕದಲ್ಲಿ ತೊಡಗಿದ್ದರು. ಹಳೆಯ ತ್ಯಾಜ್ಯವಾದ ಇದು ಮಳೆಯ ನೀರಿನಿಂದಾಗಿ ಗಟ್ಟಿಯಾಗಿತ್ತು.
ಖನಿಜಯುಕ್ತ ಕಲ್ಲುಗಳನ್ನು ಆಯುವ ಸಲುವಾಗಿ ಈ ಮಹಿಳೆಯರು ಕೆಳಗಿನಿಂದ ಗುಡ್ಡೆಯನ್ನು ಕೆರೆಯುವಾಗ ಅದು ಅವರ ಮೇಲೇ ಕುಸಿಯಿತು. ಪರಿಣಾಮವಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರು. ಉಳಿದವರಿಗೆ ಯಾವುದೇ ಗಾಯವಾಗಿಲ್ಲ.
ಜೆಸಿಬಿ ಯಂತ್ರದ ಸಹಾಯದಿಂದ ಶವಗಳನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ ಆಸ್ಪತ್ರೆಗೆ ಸಾಗಿಸಲಾಯಿತು. ಘಟನಾ ಸ್ಥಳಕ್ಕೆ ಡಿಸಿಪಿ ಪ್ರತಾಪನ್, ಎಸಿಪಿಗಳಾದ ಎ.ಆರ್.ಬಡಿಗೇರ, ಎನ್.ಎಸ್. ಪಾಟೀಲ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.