ADVERTISEMENT

ದ.ಕ: ತೀರ ನಿವಾಸಿಗಳಿಗೆ ಮುನ್ನೆಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 19:30 IST
Last Updated 11 ಏಪ್ರಿಲ್ 2012, 19:30 IST

ಮಂಗಳೂರು: ನಗರದ ವಿವಿಧ ಭಾಗಗಳಲ್ಲಿ ಬುಧವಾರ ಮಧ್ಯಾಹ್ನ 2.15ರ ಹೊತ್ತಿಗೆ ಲಘು ಭೂಕಂಪನ ಆದ ಅನುಭವ ಆಗಿದೆ. ಕಡಲ ತೀರದ ನಿವಾಸಿಗಳಿಗೆ ಹಾಗೂ ಮೀನುಗಾರರಿಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ.
ಸುನಾಮಿ ಸಂಭವಿಸಿದರೆ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ದಿಢೀರ್ ಸಭೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿದರು.

`ಮೀನುಗಾರಿಕೆಗೆ ತೆರಳಿದವರು ಸಮುದ್ರದಿಂದ ವಾಪಸ್ಸಾಗುವಂತೆ ಸೂಚನೆ ನೀಡಲಾಗಿದೆ. ಕಡಲಿನ ಬೆಳವಣಿಗೆ ಬಗ್ಗೆ ನಿಗಾ ವಹಿಸಲಾಗಿದೆ. ಕಡಲ ಕಿನಾರೆಗೆ ತೆರಳದಂತೆ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಸುನಾಮಿ ಚೆನ್ನೈ ಸಮುದ್ರ ತೀರಕ್ಕೆ ಅಪ್ಪಳಿಸಿದರೆ ನಮಗೆ ಮಾಹಿತಿ ಬರುತ್ತದೆ. ಆ ಬೆಳವಣಿಗೆಯನ್ನು ನೋಡಿಕೊಂಡು ಇಲ್ಲಿನ ಸಮುದ್ರ ತೀರದ ಜನರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜನರು ಭಯಪಡುವ ಅಗತ್ಯ ಇಲ್ಲ~ ಎಂದು ಜಿಲ್ಲಾಧಿಕಾರಿ ಎನ್. ಎಸ್.ಚನ್ನಪ್ಪ ಗೌಡ `ಪ್ರಜಾವಾಣಿ~ ತಿಳಿಸಿದರು.

ಕಂಪನ ಅನುಭವ: `ನಾನು ಕುಳಿತಿದ್ದ  ಕುರ್ಚಿ ಕೆಲವು ಸೆಕೆಂಡುಗಳ ಕಾಲ ಏಕಾಏಕಿ ಅಲ್ಲಾಡಿದೆ. ನಮ್ಮ ಕಚೇರಿಯಲ್ಲಿದ್ದ ಕೆಲವರಿಗೂ ಇದೇ ಅನುಭವ ಆಗಿದೆ~ ಎಂದು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹೀರಾ ವಿ. ಭಟ್ `ಪ್ರಜಾವಾಣಿ~ಗೆ ತಿಳಿಸಿದರು.

ನಗರದ ಹೃದಯ ಭಾಗದಲ್ಲಿರುವ ಬಾವುಟಗುಡ್ಡೆಯ ವಾಣಿಜ್ಯ ಹಾಗೂ ವಸತಿ ಸಂಕೀರ್ಣದಲ್ಲಿದ್ದವರಿಗೂ ಭೂಕಂಪನ ಅನುಭವ ಆಗಿದೆ. ಮಧ್ಯಾಹ್ನ 2.15ರ ಸುಮಾರಿಗೆ ವಸತಿ ಸಂಕೀರ್ಣದಲ್ಲಿದ್ದವರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

`ಮಧ್ಯಾಹ್ನ 2.15ರ ಸುಮಾರಿಗೆ ಎರಡು ಬಾರಿ ಅಪಾರ್ಟ್‌ಮೆಂಟ್ ನಡುಗಿದ ಅನುಭವ ಆಯಿತು~ ಎಂದು ಬಾವುಟಗುಡ್ಡೆಯ `ಲೋಬೋಪ್ರಭು~ ವಸತಿ ಸಂಕೀರ್ಣದ ನಿವಾಸಿ ಲಾರೆನ್ಸ್ ಡಿಸೋಜ `ಪ್ರಜಾವಾಣಿ~ಗೆ ತಿಳಿಸಿದರು.

ಕೂಳೂರಿನ ಗುಪ್ತ ಕೋಲ್ ಸಂಸ್ಥೆ ಕಚೇರಿ ಇರುವ ವಾಣಿಜ್ಯ ಸಂಕೀರ್ಣದಲ್ಲೂ  ಭೂಕಂಪನ ಅನುಭವ ಆಗಿದೆ.
`ನಾನು ಊಟ ಮುಗಿಸಿ ಬಂದು ಕುರ್ಚಿಯಲ್ಲಿ ಕುಳಿತಿದ್ದೆ. ಏಕಾಏಕಿ ಕುರ್ಚಿ ಅಲ್ಲಾಡಿದ ಅನುಭವ ಆಯಿತು. ಮೊದಲು ಆರೋಗ್ಯ ಸಮಸ್ಯೆಯಿಂದ ಹೀಗಾಗಿರಬಹುದು ಎಂದುಕೊಂಡಿದ್ದೆ. ಬಳಿಕ ಇದೇ ರೀತಿಯ ಅನುಭವ ಅನೇಕರಿಗೆ ಆಗಿದ್ದು ತಿಳಿಯಿತು~ ಎಂದು ಸಂಸ್ಥೆ ಸಿಬ್ಬಂದಿ ರಾಮದಾಸ ಎಕ್ಕೂರು ತಿಳಿಸಿದರು.

ಮೀನುಗಾರರು ನಿರಾತಂಕ
ಮಂಗಳೂರು:
ಸುನಾಮಿ ಬಗ್ಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದ್ದರೂ ಇಲ್ಲಿನ ಮೀನುಗಾರರು ಸ್ವಲ್ಪವೂ ಆತಂಕಗೊಂಡಿಲ್ಲ.

`ಸಾಮಾನ್ಯವಾಗಿ ಸಮುದ್ರದಲ್ಲಿ ಸ್ವಲ್ಪ ಏರುಪೇರಾದರೂ ನಮ್ಮ ಅನುಭವಕ್ಕೆ ಬರುತ್ತದೆ. ನಾವು ಸಮುದ್ರದ ಕಿನಾರೆಯಲ್ಲೇ ಇದ್ದೇವೆ. ರಾತ್ರಿ 7.30 ಆದರೂ ಸುನಾಮಿ ಲಕ್ಷಣವಿಲ್ಲ. ಸಾಕಷ್ಟು ಮೀನುಗಾರರು ಸಮುದ್ರಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಜನರು ಆತಂಕಪಡುವ ಅಗತ್ಯ ಇಲ್ಲ~ ಎಂದು ಮೀನುಗಾರ ಮುಖಂಡ ಉಮೇಶ್ ಕರ್ಕೇರ `ಪ್ರಜಾವಾಣಿ~ಗೆ ತಿಳಿಸಿದರು. 

`ಸಾಮಾನ್ಯವಾಗಿ ಸುನಾಮಿ ಅಥವಾ ತೂಫಾನ್ ಎದ್ದರೆ ಸಮುದ್ರ ತೀರದ ಮರಳಿನ ಮಟ್ಟದಲ್ಲಿ ಏರುಪೇರಾಗುತ್ತದೆ. ಸಮುದ್ರ ತೀರದಲ್ಲಿ ನೀರು ಕೆಸರು ಮಯವಾಗುತ್ತದೆ. ಅಂತಹ ಲಕ್ಷಣ ಕಾಣಿಸಿಲ್ಲ~ ಎಂದರು.
`ಸುನಾಮಿ ಬಂದರೆ ಮೀನುಗಾರರು ಸಮುದ್ರದಲ್ಲಿರುವುದೇ ಹೆಚ್ಚು ಸುರಕ್ಷಿತ. ದಡದಲ್ಲಿದ್ದವರಿಗೆ ಹೆಚ್ಚು ಅಪಾಯ~ ಎಂದು ಇನ್ನೊಬ್ಬ ಮೀನುಗಾರ ಮೋಹನ ಬೆಂಗ್ರೆ ತಿಳಿಸಿದರು.

ಕೋಡಿಮಠ ಶ್ರೀಗಳು ಹೇಳಿದ್ದು ಏನು?
ರಾಯಚೂರು:  `ಈ ದೇಶದ ಮಹಾನಗರಗಳಿಗೆ ಆಪತ್ತು ಕಾದಿದ್ದು, ಭೂಕಂಪನ ಆಗಲಿದೆ. ಭಯೋತ್ಪಾದನೆ ಭೀತಿ ಇನ್ನೂ ಹೆಚ್ಚಾಗಲಿದೆ. ನವೆಂಬರ್,ಡಿಸೆಂಬರ್‌ನಲ್ಲಿ ಮತ್ತೆ ವರುಣ ಆರ್ಭಟಿಸಲಿದ್ದಾನೆ. 2020ರ ನಂತರವೇ ರಾಜಕೀಯ ಸ್ಥಿರತೆ ಬರಲಿದೆ~.

ಇದು ಮಂಗಳವಾರ ರಾಯಚೂರಿಗೆ ಭೇಟಿ ನೀಡಿದ್ದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಹೇಳಿದ ಭವಿಷ್ಯದ ನುಡಿ. ಮರುದಿನವೇ ಅಂದರೆ ಬುಧವಾರ ಬೆಂಗಳೂರು, ಕೊಲ್ಕತ್ತಾ, ಚೆನ್ನೈ, ಸೇರಿದಂತೆ ಹಲವು ನಗರಗಳಲ್ಲಿ ಭೂಕಂಪನ ಆಗಿದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.