ADVERTISEMENT

ದಲಿತರಿಗೆ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 16 ಮೇ 2012, 19:30 IST
Last Updated 16 ಮೇ 2012, 19:30 IST

ಸುರಪುರ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಭೈರಿಮಡ್ಡಿ ಗ್ರಾಮದಲ್ಲಿ ಸವರ್ಣೀಯರು ದಲಿತರಿಗೆ ಎರಡು ತಿಂಗಳಿಂದ ಬಹಿಷ್ಕಾರ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇದರಿಂದ ಗ್ರಾಮದಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಮುಂಜಾಗ್ರತೆ ಕ್ರಮವಾಗಿ ಗ್ರಾಮದಲ್ಲಿ ಮೀಸಲು ಪೊಲೀಸ್ ತುಕಡಿಯೊಂದನ್ನು ನಿಯೋಜಿಸಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಗ್ರಾಮದಲ್ಲಿ ಕಲಹವಾಗಿದ್ದು, ಬಳಿಕ ಹೊಡೆದಾಟಕ್ಕೆ ಪರಿವರ್ತನೆಯಾಗಿ ದಲಿತ ದ್ಯಾವಪ್ಪ ರತ್ತಾಳ ಅವರ ಕೈಮುರಿದಿದೆ. ಕೆಲ ದಲಿತರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನೆ ಕುರಿತು ದಲಿತರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದು ಬಹಿಷ್ಕಾರಕ್ಕೆ ಕಾರಣವಾಗಿದೆ ಎಂದು ದಲಿತರು ತಿಳಿಸಿದ್ದಾರೆ.

ಕೆಲಸಗಳಿಗೆ ಕರೆಯುತ್ತಿಲ್ಲ. ಇದರಿಂದ ಕೂಲಿಯಿಲ್ಲದೆ ತುತ್ತಿಗೆ ತೊಂದರೆಯಾಗಿದೆ. ಕಿರಾಣಿ ಮತ್ತು ಇತರ ಅಂಗಡಿಗಳಲ್ಲಿ ದಿನಸಿ, ಇತರ ಸಾಮಗ್ರಿ ಕೊಡುತ್ತಿಲ್ಲ. ಗಿರಣಿಯಲ್ಲಿ ಹಿಟ್ಟು ಬೀಸುತ್ತಿಲ್ಲ. ಖಾರಾ ಕುಟ್ಟುತ್ತಿಲ್ಲ. ಹೋಟೆಲ್‌ಗಳಲ್ಲಿ ಚಹ, ತಿಂಡಿ ನೀಡುತ್ತಿಲ್ಲ ಎಂದೂ ದಲಿತರು ಅಳಲು ತೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.