ದಾವಣಗೆರೆ: ಸಂಪೂರ್ಣ ಸಾಲಮನ್ನಾ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಅನುಸರಿಸುತ್ತಿರುವ ವಿಳಂಬ ನೀತಿಯನ್ನು ಖಂಡಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ತಿಳಿಸಿದರು.
‘ಮೇ 30ರಂದು ರೈತ ಸಂಘಟನೆಗಳೊಂದಿಗೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ 15 ದಿನಗಳ ಒಳಗೆ ರೈತರ ಸಾಲಮನ್ನಾ ಮಾಡಿ ಋಣಮುಕ್ತ ಪತ್ರವನ್ನು ಮನೆಬಾಗಿಲಿಗೆ ಕಳುಹಿಸುವುದಾಗಿ ಹೇಳಿದ್ದರು. ಆದರೆ, ಈ ಗಡುವು ಮುಗಿದರೂ ಈ ಬಗ್ಗೆ ಇನ್ನೂ ಸ್ಪಷ್ಟವಾದ ತೀರ್ಮಾನ ಕೈಗೊಳ್ಳದಿರುವುದರಿಂದ ರೈತರಲ್ಲಿ ಆತಂಕ ಮೂಡಿದೆ. ಶೂನ್ಯ ಬಡ್ಡಿದರದ ಲಾಭ ಪಡೆಯಲು ಜೂನ್ 16ರೊಳಗೆ ಸಾಲದ ಕಂತನ್ನು ಪಾವತಿಸಬೇಕಾಗಿದೆ. ಹೊಸದಾಗಿ ಕೃಷಿ ಚಟುವಟಿಕೆಯನ್ನೂ ಆರಂಭಿಸಲು ರೈತರು ಹಣಕಾಸಿನ ತೊಂದರೆ ಎದುರಿಸುತ್ತಿದ್ದಾರೆ’ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ತಾವು ಅಧಿಕಾರಕ್ಕೆ ಬಂದರೆ ರೈತರ ₹ 53 ಸಾವಿರ ಕೋಟಿ ಸಾಲವನ್ನು 24 ಗಂಟೆಯೊಳಗೆ ಮನ್ನಾ ಮಾಡುವುದಾಗಿ ಚುನಾವಣೆ ವೇಳೆ ಕುಮಾರಸ್ವಾಮಿ ಭರವಸೆ ನೀಡಿದ್ದರು. ಈಗ ದಿನದೂಡುತ್ತಿದ್ದಾರೆ. ಬಜೆಟ್ನಲ್ಲಿ ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ. ವಿಳಂಬ ನೀತಿಯನ್ನು ಖಂಡಿಸಿ ಎಲ್ಲಾ ಜಿಲ್ಲಾ ಘಟಕಗಳು 18ರಂದು ಆಯಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಲಿವೆ’ ಎಂದರು.
‘ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್ ಬೇಷರತ್ ಬೆಂಬಲ ವ್ಯಕ್ತಪಡಿಸಿದೆ. ಹೀಗಾಗಿ ಸಾಲಮನ್ನಾಕ್ಕೆ ಯಾವುದೇ ತೊಡಕು ಇಲ್ಲ. ಸಾಲ ಮನ್ನಾ ಮಾಡಲು ಸಹಕಾರ ನೀಡುವಂತೆ ಕಾಂಗ್ರೆಸ್ ಪಕ್ಷಕ್ಕೂ ನಾವು ಮನವಿ ಮಾಡುತ್ತೇವೆ’ ಎಂದು ಹೇಳಿದರು.
‘ನೈಸರ್ಗಿಕ ವಿಕೋಪದಿಂದ ಅನುಭವಿಸಿದ ನಷ್ಟದಿಂದ, ಬೆಳೆಗೆ ಲಾಭದಾಯಕ ಬೆಲೆ ಮುಕ್ತಮಾರುಕಟ್ಟೆಯಲ್ಲಿ ಸಿಗದಿರುವುದರಿಂದ ರೈತರಿಗೆ ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿಯೇ ಸಾಲಮನ್ನಾ ಮಾಡಬೇಕಾಗಿದೆ ಎಂಬುದನ್ನು ಸರ್ಕಾರ ಸಮಾಜಕ್ಕೆ ತಿಳಿಸಿಕೊಡಬೇಕು’ ಎಂದು ಚಾಮರಸ ಮಾಲಿಪಾಟೀಲ ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.