ಚಿಕ್ಕಮಗಳೂರು: ದೀಪಾವಳಿಯ ನರಕ ಚತುರ್ದಶಿ ಸಂದರ್ಭದಲ್ಲಿ ಮಾತ್ರ ಪೂಜೆ ನಡೆಯುವ ಇಲ್ಲಿಗೆ 18 ಕಿ.ಮೀ. ದೂರದ ಮಲ್ಲೇನಹಳ್ಳಿ ಬೆಟ್ಟದಲ್ಲಿನ ಬಿಂಡಿಗ ದೇವೀರಮ್ಮನ ಜಾತ್ರೆಯಲ್ಲಿ ಬುಧವಾರ ಸಾವಿರಾರು ಭಕ್ತರು ಪಾಲ್ಗೊಂಡರು.
ಬೆಟ್ಟದ ತುತ್ತತುದಿಗೆ ಏರಿ ಆದಿಶಕ್ತಿ ದೇವೀರಮ್ಮ ದೇವಿಗೆ ನಮಸ್ಕರಿಸಿ, ಹರಕೆ ತೀರಿಸಿದರು. ರಾಜ್ಯ, ಹೊರ ರಾಜ್ಯಗಳಿಂದ ಜನರು ಬಂದಿದ್ದರು. ದೇವಿಯ ವಿಗ್ರಹವನ್ನು ಹೂವು, ಆಭರಣಗಳಿಂದ ಅಲಂಕಾರ ಮಾಡಲಾಗಿತ್ತು. ನಸುಕಿನಲ್ಲಿಯೇ ಅಭಿಷೇಕ ಪೂಜೆ ನಡೆಯಿತು.
ಜನರು ಸರದಿಯಲ್ಲಿ ಸಾಗಿ ದೇವಿಗೆ ಕೈಮುಗಿದು ಪೂಜೆ ಸಲ್ಲಿಸಿದರು. ತಾಲ್ಲೂಕಿನ ಮಲ್ಲೇನಹಳ್ಳಿಯ ಮುಖ್ಯ ದಾರಿ, ಬಾಬಾಬುಡನ್ಗಿರಿಯ ಮಾಣಿಕ್ಯಧಾರಾ, ಅರಿಶಿನಗುಪ್ಪೆ ಮಾರ್ಗಗಳ ಮೂಲಕ ಭಕ್ತರು ಬೆಟ್ಟಕ್ಕೆ ತೆರಳಿದರು. ಮಂಗಳವಾರ ರಾತ್ರಿಯಿಂದಲೇ ಭಕ್ತರು ಬೆಟ್ಟದತ್ತ ಪ್ರಯಾಣ ಬೆಳೆಸಿದ್ದರು. ಕಾಡುಮೇಡು, ತಗ್ಗುದಿಣ್ಣೆ, ಮೊನಚು ಬೆಣಚು ಕಲ್ಲು, ಜಲ್ಲಿಕಲ್ಲು, ಇಳಿಜಾರಿನ ಕಡಿದಾದ ಹಾದಿಯಲ್ಲಿ ಪ್ರಯಾಸದಿಂದಲೇ ಬೆಟ್ಟ ಏರಿದರು. ಕೆಲವರು ಕಂದಮ್ಮಗಳನ್ನು ಎತ್ತಿಕೊಂಡು ಬರಿಗಾಲಿನಲ್ಲಿ ಸಾಗಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.