ADVERTISEMENT

ನಾಲ್ಕೈದು ಸಚಿವರ ಮೇಲೆ ನಿಗಾ?

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2016, 19:30 IST
Last Updated 15 ಡಿಸೆಂಬರ್ 2016, 19:30 IST
ನಾಲ್ಕೈದು ಸಚಿವರ ಮೇಲೆ ನಿಗಾ?
ನಾಲ್ಕೈದು ಸಚಿವರ ಮೇಲೆ ನಿಗಾ?   

ಬೆಂಗಳೂರು: ಭಾರಿ ಪ್ರಮಾಣದ ಅಕ್ರಮ ಸಂಪತ್ತು ಹೊಂದಿದ ಕಾರಣಕ್ಕೆ ರಾಜ್ಯದ ನಾಲ್ಕೈದು ಸಚಿವರ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಆದಾಯ ತೆರಿಗೆ (ಐ. ಟಿ) ಇಲಾಖೆ ನಿಗಾ ಇಟ್ಟಿದೆ ಎಂದು ಗೊತ್ತಾಗಿದೆ.

ಸಚಿವರ ಹಣಕಾಸು ವ್ಯವಹಾರಗಳ ಮೇಲೆ ಈ ಎರಡೂ ಇಲಾಖೆಗಳ ಅಧಿಕಾರಿಗಳು ಕಣ್ಣಿಟ್ಟಿರುವ ಮಾಹಿತಿ ಈಗಾಗಲೇ ಸರ್ಕಾರದ ಗಮನಕ್ಕೆ ಬಂದಿದೆ ಎನ್ನಲಾಗಿದೆ.

ರಾಸಲೀಲೆ ಪ್ರಕರಣದಲ್ಲಿ ಅಬಕಾರಿ ಸಚಿವ ಎಚ್.ವೈ. ಮೇಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ನಡೆದಿರುವ ಈ ಬೆಳವಣಿಗೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ.

ಈ ಮಧ್ಯೆ, ಕಪ್ಪುಹಣ ಬಿಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ವಶದಲ್ಲಿರುವ ತಮಿಳುನಾಡು ಮೂಲದ ಗುತ್ತಿಗೆದಾರ ಚಂದ್ರಕಾಂತ ರಾಮಲಿಂಗಮ್‌, ತಮ್ಮ ಹೆಸರಿನಲ್ಲಿರುವ ಬ್ಯಾಂಕು ಖಾತೆಯಿಂದ ಪ್ರಭಾವಿ ಸಚಿವರೊಬ್ಬರ ಪುತ್ರನ ಎಸ್‌ಬಿಎಂ  ಖಾತೆಗೆ ಹಣ ವರ್ಗಾವಣೆ ಮಾಡಿರುವ ಮಾಹಿತಿಯನ್ನು ತನಿಖೆ ವೇಳೆ ಬಾಯಿ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.

₹ 2 ಸಾವಿರ ನೋಟುಗಳ ₹ 5.7 ಕೋಟಿ ಜಪ್ತಿ ಪ್ರಕರಣದಲ್ಲಿ ಬಂಧಿತರಾಗಿರುವ ಚಂದ್ರಕಾಂತ ರಾಮಲಿಂಗಮ್‌ ವಿಚಾರಣೆ ಸಂದರ್ಭದಲ್ಲಿ ನೀಡಿದ ಮಾಹಿತಿ ಆಧರಿಸಿ ಇಬ್ಬರು ಪ್ರಭಾವಿ ಸಚಿವರನ್ನು ಇ.ಡಿ ಮತ್ತು ಐ.ಟಿ ಅಧಿಕಾರಿಗಳು ವಿಚಾರಣೆಗೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ಚಿಕ್ಕರಾಯಪ್ಪ ಮತ್ತು ಜಯಚಂದ್ರ ಅವರಿಗೆ ಈ  ಪ್ರಭಾವಿ ಸಚಿವರ ಒಡನಾಟವಿತ್ತು. ರಾಜ್ಯದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಈ ಪ್ರಕರಣದಲ್ಲಿ ಕೈ ಜೋಡಿಸಿದ್ದು, ಸಚಿವರ ದೊಡ್ಡ ಮೊತ್ತದ ಹಣವನ್ನು ಕೆಲವು ಬ್ಯಾಂಕ್ ಅಧಿಕಾರಿಗಳ ಜೊತೆ ಶಾಮೀಲಾಗಿ ಬದಲಾಯಿಸಿದ್ದರು. ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ ವೇಳೆ ಇಬ್ಬರು ಸಚಿವರ ನಿರ್ದೇಶನದಂತೆ ನೋಟು ಬದಲಾವಣೆ ಮಾಡಿರುವ ಮಾಹಿತಿ ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.