ಪುತ್ತೂರು: ಅತ್ತೆ ಮತ್ತು ನಾದಿನಿಯನ್ನು ತುಮಕೂರಿನಲ್ಲಿ ಕೊಲೆ ಮಾಡಿದ ಬಳಿಕ ಊರಿಗೆ ಬಂದು ತನ್ನ ಎಳೆಯ ಮಕ್ಕಳಿಬ್ಬರನ್ನು ಪುತ್ತೂರು ತಾಲ್ಲೂಕಿನ ಪಾಣಾಜೆ ಗ್ರಾಮದ ಅರ್ಧಮೂಲೆ ಎಂಬಲ್ಲಿ ಬಾವಿಗೆ ತಳ್ಳಿ ಬರ್ಬರವಾಗಿ ಕೊಲೆ ಮಾಡಿದ್ದ ಅಪರಾಧಿಗೆ ಪುತ್ತೂರಿನ ನ್ಯಾಯಾಲಯ ಮಂಗಳವಾರ ಮರಣ ದಂಡನೆ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಪುತ್ತೂರಿನ 5ನೇ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಶಿವಶಂಕರೇ ಗೌಡ ಅವರು ಈ ಮಹತ್ವದ ಆದೇಶ ನೀಡಿದ್ದಾರೆ.
ಮಹಾರಾಷ್ಟ್ರದ ಸೋಲಾಪುರದ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ವ್ಯವಸ್ಥಾಪಕನಾಗಿದ್ದ ರಮೇಶ್ ನಾಯ್ಕ ತುಮಕೂರಿನ ಬನಶಂಕರಿ ಸಮೀಪದ ಕುಮ್ಟೇ ಬಡಾವಣೆಯಲ್ಲಿ ಸ್ವಂತ ಮನೆಯೊಂದನ್ನು ಮಾಡಿಕೊಂಡಿದ್ದ.
ಈ ಮನೆಯಲ್ಲಿ ಪತ್ನಿಯ ಸಹೋದರಿ (ನಾದಿನಿ) ಸವಿತಾ ಮತ್ತು ಅತ್ತೆ ಸರಸ್ವತಿ ಎಂಬವರೊಂದಿಗೆ ವಾಸವಾಗಿದ್ದ. 2010ರ ಜೂನ್ 14ರಂದು ನಾದಿನಿ ಮತ್ತು ಅತ್ತೆಯನ್ನು ಅಲ್ಲಿ ಕೊಲೆ ಮಾಡಿ ನೀರಿನ ಟ್ಯಾಂಕಿಗೆ ಎಸೆದು, ರಮೇಶ್ ನಾಯ್ಕ ಜೂನ್ 16ರಂದು ಮಂಗಳೂರಿಗೆ ಬಂದಿದ್ದ.
ಮಂಗಳೂರಿನ ಬ್ಯಾಂಕೊಂದರಲ್ಲಿ ಉದ್ಯೋಗಿಯಾಗಿದ್ದುಕೊಂಡು ಮಂಗಳಾದೇವಿ ಬಳಿ ವಾಸ್ತವ್ಯವಿದ್ದ ಪತ್ನಿ ಮನೆಗೆ ಹೋಗಿದ್ದ. ಅಲ್ಲಿದ್ದ ತನ್ನ ಮಕ್ಕಳಾದ ಮೂರೂವರೆ ವರ್ಷದ ಕೃತಿಕಾ ಮತ್ತು ಮೋಹನ್ ರಾಜ್ (10) ಅವರನ್ನು ಬಾಡಿಗೆ ಟ್ಯಾಕ್ಸಿಯೊಂದರಲ್ಲಿ ಪಾಣಾಜೆ ಗ್ರಾಮದ ಅರ್ಧಮೂಲೆ ಎಂಬಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿನ ಕೆರೆಯಲ್ಲಿ ಮುಳುಗಿಸಿ ಕೊಲೆ ಮಾಡಿದ ಆರೋಪವಿತ್ತು. ಮಕ್ಕಳಿಬ್ಬರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.