ಬೆಂಗಳೂರು: ಮಾಧ್ಯಮಗಳು ಹಾಗೂ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಕೀಲರು, ಈ ಸಂಬಂಧ ಸೋಮವಾರ (ಮಾರ್ಚ್ 5) ರಾಜ್ಯದಾದ್ಯಂತ ನ್ಯಾಯಾಲಯ ಕಲಾಪ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ. ಕಲಾಪ ಬಹಿಷ್ಕಾರಕ್ಕೆ ರಾಜ್ಯ ವಕೀಲರ ಪರಿಷತ್ತು ಹಾಗೂ ಬೆಂಗಳೂರು ವಕೀಲರ ಸಂಘ ತೀರ್ಮಾನಿಸಿದೆ.
ಶನಿವಾರ ಪರಿಷತ್ತಿನ ಆವರಣದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. `ಶುಕ್ರವಾರ ಬೆಳಿಗ್ಗೆ 10.30ರಿಂದಲೇ ವಕೀಲರು, ಮಾಧ್ಯಮದವರು ಹಾಗೂ ಪೊಲೀಸರ ನಡುವೆ ಚಕಮಕಿ ಆರಂಭಗೊಂಡಿತ್ತು. ಆಗ ಕೇವಲ ವಕೀಲರನ್ನಷ್ಟೇ ದೂಷಿಸಿ ಎಲೆಕ್ಟ್ರಾನಿಕ್ ಮಾಧ್ಯಮಗಳು ಸುದ್ದಿ ಬಿತ್ತರಿಸಿದವು. ಆದರೆ ನಂತರದ ಬೆಳವಣಿಗೆಯಲ್ಲಿ ಪೊಲೀಸರೇ ಖುದ್ದಾಗಿ ವಾಹನಗಳಿಗೆ ಬೆಂಕಿ ಹಚ್ಚಿದರು.
ಇದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಇದನ್ನು ಕೆಲವು ವಕೀಲರು ತಮ್ಮ ಮೊಬೈಲ್ ದೂರವಾಣಿಯಲ್ಲಿರುವ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾರೆ. ಆದರೆ ಪೊಲೀಸರ ವರ್ತನೆ ಕುರಿತು ಮಾಧ್ಯಮಗಳು ಬಿತ್ತರಿಸಿಯೇ ಇಲ್ಲ. ವಕೀಲರಿಗೆ ರೌಡಿಗಳ ಹಣೆಪಟ್ಟಿ ಕಟ್ಟಿ ಸುದ್ದಿ ಮಾಡಿದವು~ ಎನ್ನುವುದು ಈ ವಕೀಲರ ಆರೋಪ.
ಇದಕ್ಕಾಗಿ ವಕೀಲರು ತೆಗೆದಿರುವ ಛಾಯಾಚಿತ್ರ ಹಾಗೂ ವಿಡಿಯೊ ದೃಶ್ಯಗಳನ್ನು ರಾಜ್ಯಪಾಲರಿಗೆ ನೀಡುವ ಮೂಲಕ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುಲು ಕೋರಿ ಸಭೆ ತೀರ್ಮಾನಿಸಿದೆ. ಮಾಧ್ಯಮಗಳು ಕೇವಲ ವಕೀಲರ ವಿರುದ್ಧವಷ್ಟೇ ಸುದ್ದಿ ಬಿತ್ತರಿಸಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ ಎಂಬ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲು ಸಭೆ ನಿರ್ಣಯ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.
ಕಕ್ಷಿದಾರರ ಹಿಡಿಶಾಪ: ಶುಕ್ರವಾರದ ಘಟನೆಗಳಿಂದ ಉದ್ವಿಗ್ನ ವಾತಾವರಣ ಉಂಟಾಗಿದ್ದ ಹಿನ್ನೆಲೆಯಲ್ಲಿ ನಗರದ ಎಲ್ಲ ನ್ಯಾಯಾಲಯಗಳ ಶನಿವಾರದ ನ್ಯಾಯಾಂಗ ಕಲಾಪಗಳನ್ನು ರದ್ದು ಮಾಡಲಾಗಿತ್ತು. ಆದರೆ ಇದರ ಅರಿವು ಇಲ್ಲದ ಹಲವು ಕಕ್ಷಿದಾರರು ಕೋರ್ಟ್ಗೆ ಬಂದು ಹಿಡಿಶಾಪ ಹಾಕುತ್ತ ಹಾಗೆಯೇ ಮರಳಿದರು.
ಪೊಲೀಸರು ತಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಕಳೆದ ಜನವರಿ 18ರಂದು ವಕೀಲರು ಇದೇ ರೀತಿ ಕೋರ್ಟ್ ಕಲಾಪ ಬಹಿಷ್ಕರಿಸಿದ್ದು ಇಲ್ಲಿ ಉಲ್ಲೇಖಾರ್ಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.