ಬೆಂಗಳೂರು: ‘ನಿಫಾ ವೈರಸ್ ಹರಡದಂತೆ ರಾಜ್ಯದ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಎಲ್ಲಾ ಜಿಲ್ಲೆಯ ವಿಚಕ್ಷಣಾ ಅಧಿಕಾರಿಗಳು ಹಾಗೂ ವೈದ್ಯಕೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಲಾಗಿದೆ’ ಎಂದು ವಾಹಕಗಳ ಮೂಲಕ ಹರಡುವ ರೋಗಗಳ ನಿಯಂತ್ರಣ ರಾಷ್ಟ್ರೀಯ ಕಾರ್ಯಕ್ರಮದ (ಎನ್ವಿಬಿಡಿಸಿಪಿ) ಸಂಶೋಧನಾ ಅಧಿಕಾರಿ ಡಾ.ಶರೀಫಾ ತಿಳಿಸಿದರು.
‘ವೈರಸ್ ಹರಡಲು ಕಾರಣ ಏನು, ಇದು ಹೇಗೆ ಬರುತ್ತದೆ, ಇದಕ್ಕೆ ಚಿಕಿತ್ಸೆ ಏನು, ಹೇಗೆ ಉಪಚರಿಸಬೇಕು ಎಂಬುದರ ಬಗ್ಗೆ ನಿಖರ ಮಾಹಿತಿ ನೀಡಲಾಗಿದೆ’ ಎಂದರು.
‘ರಾಜ್ಯದ ಗಡಿಭಾಗದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಿಂದ ಬರುವ ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ ಮಾಡುವುದು, ವೈರಸ್ ಲಕ್ಷಣಗಳು ಕಂಡು ಬಂದರೆ 14 ದಿನಗಳವರೆಗೆ ಅವರಿಗೆ ಇಲಾಖೆಯ ಕಣ್ಗಾವಲಿನಲ್ಲಿಯೇ ಚಿಕಿತ್ಸೆ ಕೊಡಿಸಲು ಆದ್ಯತೆ ನೀಡಲಾಗಿದೆ’ ಎಂದು ಅವರು ಹೇಳಿದರು.
‘ತಲೆ ನೋವು, ಜ್ವರ, ಮೈಕೈ ನೋವು ಕಾಣಿಸಿಕೊಂಡವರು ಕೂಡಲೇ ವೈದ್ಯರಿಗೆ ತೋರಿಸಬೇಕು’ ಎಂದರು.
‘ಬಾವಲಿಗಳು ಹೆಚ್ಚಿರುವ ಕಡೆ ಎಚ್ಚರಿಕೆ ವಹಿಸುವಂತೆ ಜಿಲ್ಲೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಇಂತಹ ಪ್ರಕರಣಗಳಲ್ಲಿ ಪಶುವೈದ್ಯರ ನೆರವು ಪಡೆಯಲು ತಿಳಿಸಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.