ADVERTISEMENT

ನೀತಿ ಸಂಹಿತೆ ನಿರಂತರವಾಗಿರಲಿ

ಚಿತ್ರದುರ್ಗದಲ್ಲಿ ನಟ ಪ್ರಕಾಶ್ ರೈ ಅಭಿಮತ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 4:23 IST
Last Updated 7 ಏಪ್ರಿಲ್ 2018, 4:23 IST

ಚಿತ್ರದುರ್ಗ: ನೀತಿ ಸಂಹಿತೆ ಚುನಾವಣಾ ಸಂದರ್ಭಕ್ಕಷ್ಟೇ ಸೀಮಿತವಾಗಬಾರದು. ಅದೂ ನಿರಂತರವಾಗಿರಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ಚಿತ್ರನಟ ಪ್ರಕಾಶ್ ರೈ ಅಭಿಪ್ರಾಯಪಟ್ಟರು.

ಇಲ್ಲಿನ ಕೆಇಬಿ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಮಹಾಶಿವಶರಣ ಹರಳಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಭ್ರಷ್ಟಾಚಾರಕ್ಕಿಂತ ಕೋಮುವಾದ ಅತ್ಯಂತ ಅಪಾಯಕಾರಿಯಾಗಿದೆ. ಅದನ್ನು ಬುಡಸಮೇತ ಕಿತ್ತುಹಾಕಲು ಯುವಕರು ಮುಂದಾಗಬೇಕು’ ಎಂದರು.

ನರೇಂದ್ರ ಮೋದಿ ದೇವರಲ್ಲ:  ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್ ರೈ, ‘ಪ್ರಧಾನಿ ಮೋದಿ ದೇವರಾ? ಇಲ್ಲವಲ್ಲ. ದೇಶದ ಪ್ರತಿಯೊಬ್ಬ ಪ್ರಜೆಗೂ ಅವರು ಪ್ರಧಾನಿ. ನಾನು ಅವರಿಗೆ ಮತ ಹಾಕದೇ ಇರಬಹುದು. ಆದರೆ, ನನ್ನ ಪ್ರಧಾನಿಯೂ ಹೌದು. ಅದನ್ನು ನಾನು ಒಪ್ಪಿಕೊಂಡಿದ್ದೇನೆ. ಅದೇರೀತಿ ಅವರನ್ನು ಪ್ರಶ್ನಿಸುವ ಅಧಿಕಾರವೂ ಇದೆ’ ಎಂದು ರೈ ಹೇಳಿದರು.
**
ಸಾಮಾಜಿಕ ಹೋರಾಟಕ್ಕೆ ಬಿಜೆಪಿ ಸ್ಪೂರ್ತಿ
‘ನಾನು ಸಾಮಾಜಿಕ ಹೋರಾಟ ಆರಂಭಿಸಲು ಬಿಜೆಪಿಯೇ ನನಗೆ ಸ್ಪೂರ್ತಿ. ಹೋರಾಟದ ಕಿಚ್ಚು ಬರಲು ಆ ಪಕ್ಷದ ಮುಖಂಡರೇ ಕಾರಣ. ದೇಶದೊಳಗಿರುವ ಯಾವುದೇ ಪಕ್ಷವಾಗಲಿ, ಎಂಥದ್ದೇ ಅಧಿಕಾರ, ಹುದ್ದೆಯ ಆಮಿಷ ತೋರಿಸಿದರೂ ರಾಜಕೀಯ ಕ್ಷೇತ್ರಕ್ಕೆ ಬರುವುದಿಲ್ಲ. ಆದರೆ, ಯಾವುದೇ ಪಕ್ಷದ ಮುಖಂಡರಿಂದ ತಪ್ಪುಗಳು ನಡೆದಾಗ ಪ್ರಶ್ನಿಸುವ ಪ್ರಜೆಯಾಗಿಯೇ ಕೊನೆಯವರೆಗೂ ಉಳಿಯುತ್ತೇನೆ’ ಎಂದರು.

ADVERTISEMENT

ಶಿಕ್ಷಣ, ಆರೋಗ್ಯ ಕ್ಷೇತ್ರ ರಾಷ್ಟ್ರೀಕರಣ ಆಗಬಾರದು. ಇದರ ಜವಾಬ್ದಾರಿಯನ್ನು ಆಯಾ ರಾಜ್ಯ ಸರ್ಕಾರಗಳೇ ನೋಡಿಕೊಳ್ಳಬೇಕು. ಕೇಂದ್ರ ಸರ್ಕಾರ ನದಿ ಮೂಲಗಳನ್ನು ಉಳಿಸುವ, ರೈಲ್ವೆ, ವಿದ್ಯುತ್ ಇತರೆ ದೊಡ್ಡ ಮಟ್ಟದ ಯೋಜನೆಗಳಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.