ಮೂಡುಬಿದಿರೆ: ಇಲ್ಲಿನ ಕೃಷಿ ವಿಚಾರ ವಿನಿಮಯ ಕೇಂದ್ರ, ರೈತ ಸಂಘ, ಕೃಷಿಕ ಸಮಾಜ ಮಂಗಳೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ಆಳ್ವಾಸ್ ಸಂಸ್ಥೆಗಳ ಸಹಯೋಗದಲ್ಲಿ ವಿದ್ಯಾಗಿರಿಯಲ್ಲಿ 3ನೇ ವರ್ಷದ ಕೃಷಿ ಸಮ್ಮೇಳನ ‘ಆಳ್ವಾಸ್ ಕೃಷಿಸಿರಿ’ ನವೆಂಬರ್ 30ರಿಂದ ಡಿಸೆಂಬರ್ 3ರವರೆಗೆ ನಡೆಯಲಿದೆ.
ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿ, ಆಳ್ವಾಸ್ ನುಡಿಸಿರಿ ಡಿಸೆಂಬರ್ 1ರಿಂದ ಆರಂಭವಾಗುತ್ತಿರುವ ಕಾರಣ ಅದರ ಜತೆಯಲ್ಲಿ ಜೀವನಕ್ಕೆ ಮೂಲಾಧಾರವಾಗಿರುವ ಕೃಷಿಯ ಕುರಿತು ಚಿಂತನ–ಮಂಥನ ನಡೆಯಲಿದೆ ಎಂದರು.
ಕೃಷಿಸಿರಿಯು ನ.30ರಂದು ಸಂಜೆ 6ಗಂಟೆಗೆ ಉದ್ಘಾಟನೆಗೊಳ್ಳಲಿದೆ. ವಿಶೇಷವಾಗಿ ಎರಡು ಎಕರೆ ಪ್ರದೇಶದಲ್ಲಿ ಬೆಂಗಳೂರಿನ ಸುಧಾರಿತ ಹಾಗೂ ಊರಿನ ಸಾಂಪ್ರಾದಾಯಿಕ ಮಾದರಿಯಲ್ಲಿ ಬೆಳೆದ ನೈಜ ಕೃಷಿ ದರ್ಶನಕ್ಕೆ ಅವಕಾಶ ಇದೆ. ವಿಶೇಷ ಆಕರ್ಷಣೆಯಾಗಿ ಮತ್ಸ್ಯ ಮೇಳ, ಸಮುದ್ರ ಚಿಪ್ಪು, ಶ್ವಾನ, ಬೆಕ್ಕು, ಪಕ್ಷಿ, ಜಾನುವಾರು ಪ್ರದರ್ಶನ, ಬೊನ್ಸಾಯಿ ಕೃಷಿ, 44 ವಿಧದ ಬಿದಿರಿನ ಗಿಡ, ಕೃಷಿ ಸಾಹಿತ್ಯ-ಸಲಕರಣೆಗಳು, ನ್ಯೂಜಿಲ್ಯಾಂಡ್ ಮೂಲದ
ವಿಶಿಷ್ಟ ಬಣ್ಣಗಳ ಹಾಗೂ ಆಹಾರಕ್ಕಾಗಿ ಬಳಸುವ ಸಸ್ಯಗಳು, ತರಕಾರಿ ಹಾಗೂ ಹಣ್ಣುಗಳಲ್ಲಿ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ.
ಕೃಷಿ ಸಂಬಂಧಿ ಗೋಷ್ಠಿಗಳು ನಡೆಯಲಿದ್ದು, ರಾಜ್ಯಮಟ್ಟದ ಉತ್ತಮ ಕೃಷಿಕರ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.