ಬೆಂಗಳೂರು: ಪಶುಸಂಗೋಪನೆ ಇಲಾಖೆ ಪುನಾರಚನೆ ಬಳಿಕ ಹೊಸದಾಗಿ ವೃಂದ ಮತ್ತು ನೇಮಕಾತಿ (ಸಿ ಅಂಡ್ ಆರ್) ನಿಯಮಗಳನ್ನು ರೂಪಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಇದರಿಂದ ಇಲಾಖೆಯಲ್ಲಿನ ಸುಮಾರು 10,000 ನೌಕರರಿಗೆ ಬಡ್ತಿ ದೊರೆಯುವ ಜೊತೆಗೆ ವೇತನ ಪರಿಷ್ಕರಣೆ ಆಗಲಿದೆ. ಈಗಾಗಲೇ ಈ ಸಂಬಂಧ ರಾಜ್ಯ ಪತ್ರದಲ್ಲಿ ಅಧಿಸೂಚನೆ ಪ್ರಕಟಿಸಲಾಗಿದೆ.
ಒಂದು ವರ್ಷದ ಹಿಂದೆ ಕರಡು ಸಿದ್ಧವಾಗಿದ್ದರೂ ಅಧಿಸೂಚನೆ ಹೊರಡಿಸಲು ವಿಳಂಬವಾದ ಕಾರಣ ಪಶು ವೈದ್ಯರು ಮತ್ತು ಇಲಾಖೆಯ ಇತರ ನೌಕರರು ಕಳೆದ ಐದು ತಿಂಗಳಿಂದ ಹೋರಾಟ ನಡೆಸುತ್ತಿದ್ದರು. ಜಾನುವಾರುಗಳ ಕಾಲು– ಬಾಯಿ ರೋಗಕ್ಕೆ ಲಸಿಕೆ ಹಾಕದೇ ಬಹಿಷ್ಕಾರ ಮಾಡಿದ್ದರು.
ಇಲಾಖೆಯನ್ನು 2012 ರಲ್ಲಿ ಪುನರ್ ರಚನೆ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ, ವೃಂದ ಮತ್ತು ನೇಮಕಾತಿ ತಿದ್ದುಪಡಿ ಮಾಡದ ಕಾರಣ ಕಳೆದ ಐದು ವರ್ಷಗಳಿಂದ ಪದೋನ್ನತಿ ಸಿಕ್ಕಿರಲಿಲ್ಲ. ರಾಜ್ಯದ ಅರ್ಧಕ್ಕೂ ಹೆಚ್ಚಿನ ತಾಲ್ಲೂಕುಗಳಲ್ಲಿ ಪಶುವೈದ್ಯಾಧಿಕಾರಿಗಳೇ ಹೆಚ್ಚುವರಿ ಪ್ರಭಾರದಲ್ಲಿ ಸಹಾಯಕ ನಿರ್ದೆಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಅಭಿವೃದ್ಧಿ ಕಾರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ ಎಂದು ಕರ್ನಾಟಕ ಪಶು ವೈದ್ಕಕೀಯ ಸಂಘ ಸರ್ಕಾರಕ್ಕೆ ಮನವಿ ಮಾಡಿತ್ತು.
‘ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದೆ’ ಎಂದು ಕರ್ನಾಟಕ ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಶಿವಶರಣಪ್ಪ ಜಿ.ಯಲಗೋಡ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.