ADVERTISEMENT

ಪಾಟೀಲಗೆ ಸಿಗದ ರಾಹುಲ್‌ ಗಾಂಧಿ ಭರವಸೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 13:12 IST
Last Updated 9 ಜೂನ್ 2018, 13:12 IST
ಪಾಟೀಲಗೆ ಸಿಗದ ರಾಹುಲ್‌ ಗಾಂಧಿ ಭರವಸೆ
ಪಾಟೀಲಗೆ ಸಿಗದ ರಾಹುಲ್‌ ಗಾಂಧಿ ಭರವಸೆ   

ನವದೆಹಲಿ: ಉಪ ಮುಖ್ಯಮಂತ್ರಿ ಅಥವಾ ಸಚಿವ ಸ್ಥಾನದ ಕುರಿತು ಶನಿವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭೇಟಿ ಮಾಡಿದ ಕಾಂಗ್ರೆಸ್ ಶಾಸಕ ಎಂ.ಬಿ. ಪಾಟೀಲ ಅವರಿಗೆ ಯಾವುದೇ ಸ್ಪಷ್ಟ ಭರವಸೆ ದೊರೆತಿಲ್ಲ.

ರಾಹುಲ್‌ ಗಾಂಧಿ ಅವರೊಂದಿಗೆ ಸುಮಾರು 45 ನಿಮಿಷ ಚರ್ಚೆ ನಡೆಸಿ ಕರ್ನಾಟಕದ ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ಎಂ.ಬಿ.ಪಾಟೀಲ ವಿವರಿಸಿದ್ದಾರೆ.

ಶುಕ್ರವಾರ ಸಂಜೆಯೇ ದೆಹಲಿ ತಲುಪಿದ್ದ ಅವರು, ಶನಿವಾರ ಬೆಳಿಗ್ಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅಹಮದ್‌ ಪಟೇಲ್‌ ಭೇಟಿಯಾಗಿ ಬಳಿಕ ರಾಹುಲ್‌ ಗಾಂಧಿ ನಿವಾಸಕ್ಕೆ ತೆರಳಿದರು.

ADVERTISEMENT

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ದಿನೇಶ್‌ ಗುಂಡುರಾವ್‌, ಸಂಸದೀಯ ವ್ಯವಹಾರ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಸಹ ಸಭೆಯಲ್ಲಿ ಭಾಗಿಯಾದರು.

ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪಾಟೀಲ, ‘ನಾನು ಉಪ ಮುಖ್ಯಮಂತ್ರಿ, ಸಚಿವ ಸ್ಥಾನ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಹೈಕಮಾಂಡ್‌ ಮುಂದೆ ಈ ಯಾವುದೇ ಪ್ರಸ್ತಾಪ, ಬೇಡಿಕೆಯನ್ನು ಇಟ್ಟಿಲ್ಲ. ಈ ಸಭೆಗೆ ಸಂಬಂಧಿಸಿದಂತೆ ಸತೀಶ್‌ ಜಾರಕಿಹೊಳಿ ಸೇರಿ ನನ್ನ ಇತರ ಸ್ನೇಹಿತರೊಂದಿಗೆ ಚರ್ಚಿಸಿ ಮುಂದಿನ ನಡೆ ನಿರ್ಧರಿಸಲಿದ್ದೇನೆ’ ಎಂದರು.

ಸಚಿವ ಸ್ಥಾನ ದೊರೆಯದಿರಲು ಮಲ್ಲಿಕಾರ್ಜುನ ಖರ್ಗೆ ಕಾರಣ ಎಂಬ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿವರು ಅವರು, ‘ಖರ್ಗೆ ಅವರು ಹಿರಿಯ ಮುಖಂಡರು. ಅವರ ಬಗ್ಗೆ ನನಗೆ ಗೌರವವಿದೆ. ಅವರನ್ನು ಆರೋಪಿಸುವುದು ಸರಿಯಲ್ಲ..’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.