ಬೆಂಗಳೂರು: ಸಂಸದ ಪ್ರತಾಪ್ ಸಿಂಹ ಮತ್ತು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರು ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
‘ಉಗ್ರ ಹೋರಾಟ ನಡೆಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ನೀಡಿದ್ದರು’ ಎಂದು ಮೈಸೂರು– ಕೊಡಗು ಕ್ಷೇತ್ರದ ಬಿಜೆಪಿ ಸಂಸದ, ಯುವ ಮೋರ್ಚಾ ಅಧ್ಯಕ್ಷ ಪ್ರತಾಪ್ಸಿಂಹ, ತಮ್ಮ ಫೇಸ್ಬುಕ್ ವಾಲ್ನಲ್ಲಿ ಹಾಕಿದ್ದ ವಿಡಿಯೊ ವೈರಲ್ ಆಗಿತ್ತು. ಆದರೆ, ‘ಉಗ್ರ ಹೋರಾಟ’ ಪಕ್ಷದ ನೀತಿಯಲ್ಲ ಎಂದ ಬಿಜೆಪಿ ನಾಯಕರು ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ್ದರು.
ಮೈಸೂರಿನಲ್ಲಿ ಸೋಮವಾರ ಮಾತನಾಡಿದ್ದ ಕೇಂದ್ರ ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲ ರಾಜ್ಯ ಸಚಿವ ಅನಂತಕುಮಾರ ಹೆಗಡೆ, ‘ಸಿದ್ದರಾಮಯ್ಯ ಎಂಬ ಪಾಪದ ಪಿಂಡವು ಎಲ್ಲಿ ಹುಟ್ಟಿದೆಯೋ ಅದನ್ನು ಅಲ್ಲಿಯೇ ಮುಗಿಸಬೇಕು’ ಎಂದು ಹೇಳಿದ್ದರು.
ಈ ಇಬ್ಬರ ಹೇಳಿಕೆ ಹಾಗೂ ಅವರು ಬಳಸಿರುವ ಭಾಷೆಗೆ ಹಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಕರ್ನಾಟಕದ ಹಳ್ಳಿ ಹಳ್ಳಿಯಲ್ಲಿರುವ ಕೆರೆಗಳನ್ನು ತುಂಬಿಸಲು ಉಗ್ರ ಹೋರಾಟ ಮಾಡಿ’ ಎಂದು ಒಬ್ಬರು ಹೇಳಿದರೆ, ‘ಇದು ಜನಪ್ರತಿನಿಧಿಗಳು ಬಳಸುವ ಭಾಷೆಯೇ?’ ಎಂದು ಕೆಲವರು ಪ್ರಶ್ನಿಸಿದ್ದಾರೆ.
‘ಯಾರಿಗೂ ಬೇಡದ ಈ ದತ್ತ ಹೋರಾಟ ನಿಲ್ಲಿಸಿ. ಚುನಾವಣೆ ಹತ್ತಿರ ಬಂದಾಗ ಮಾತ್ರ ನೆನಪು ಮಾಡಿಕೊಂಡು ಈ ರೀತಿ ನಿಮ್ಮ ಬೆಲೆಯನ್ನು ಕಳೆದುಕೊಳ್ಳಬೇಡಿ’ ಎಂದು ವೀರಣ್ಣ ಎಂಬುವರು ಹೇಳಿದ್ದಾರೆ.
‘ಬಿಜೆಪಿ ಹಾಗೂ ಸಂಘ ಪರಿವಾರದವರು ಕರ್ನಾಟಕವನ್ನು ಮತ್ತೊಂದು ಉತ್ತರ ಪ್ರದೇಶ ಮತ್ತು ಬಿಹಾರ ಮಾಡುವ ಹಾಗಿದೆ. ಕನ್ನಡಿಗರೇ ನಿಮಗೆ ಸ್ವಾಭಿಮಾನವಿದ್ದರೆ ಇವರನ್ನು ಮುಂದಿನ ಚುನಾವಣೆಯಲ್ಲಿ ಧೂಳಿಪಟ ಮಾಡಿ’ ಎಂದಿದ್ದಾರೆ ಒಕ್ಕಲೇಶ್.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.