ADVERTISEMENT

ಪ್ರತಿಕ್ರಿಯೆ ಸಿದ್ಧಪಡಿಸಲು ಉಪ ಸಮಿತಿ

ಕಸ್ತೂರಿ ರಂಗನ್‌ ವರದಿ ಜಾರಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 19:30 IST
Last Updated 19 ಡಿಸೆಂಬರ್ 2013, 19:30 IST

ಬೆಂಗಳೂರು: ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದಂತೆ ಡಾ.ಕೆ.ಕಸ್ತೂರಿ­ರಂಗನ್‌ ಸಮಿತಿಯ ವರದಿ ಜಾರಿ­ಯಿಂದ ಆಗುವ ಸಮಸ್ಯೆಗಳ ಕುರಿತು ಕೇಂದ್ರಕ್ಕೆ ಸಲ್ಲಿಸ­ಬೇಕಾದ ಪ್ರತಿಕ್ರಿಯೆ ಸಿದ್ಧಪಡಿಸು­ವುದು ಹಾಗೂ ರಾಜ್ಯದ ರಾಷ್ಟ್ರೀಯ ಉದ್ಯಾನ­ಗಳು, ವನ್ಯಜೀವಿ­ಗಳ ಪರಿಸರ ಸೂಕ್ಷ್ಮ ಪ್ರದೇಶಗಳ ಗಡಿ ನಿಗದಿ ಕುರಿತು ಪರಿ­ಶೀಲಿ­ಸಲು ಸಂಪುಟ ಉಪಸಮಿತಿ ರಚಿಸ­ಲಾಗಿದೆ.

ಅರಣ್ಯ ಸಚಿವ ಬಿ.ರಮಾನಾಥ ರೈ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಸಹಕಾರ ಸಚಿವ ಎಚ್‌.ಎಸ್‌.ಮಹ­ದೇವ­­ಪ್ರಸಾದ್‌ ಮತ್ತು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ  ಇರು­ತ್ತಾರೆ.

ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಚಾಮರಾಜ­ನಗರ, ಕೊಡಗು, ಹಾಸನ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳ 1500ಕ್ಕೂ ಹೆಚ್ಚು ಹಳ್ಳಿಗಳು ಕಸ್ತೂರಿ­ರಂಗನ್‌ ವರದಿಯ ವ್ಯಾಪ್ತಿಗೆ ಬರುತ್ತವೆ. ಈ ಪ್ರದೇಶದಲ್ಲಿ ಮರಳು ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಬೃಹತ್‌ ಕಟ್ಟಡಗಳ ನಿರ್ಮಾಣ, ಕೆಂಪು ವಲಯದ ಕೈಗಾರಿಕೆ­ಗಳ ಸ್ಥಾಪನೆಗೆ ನಿಷೇಧವಿದೆ. ಈ ಆದೇಶದಿಂದ ಆಗಬಹುದಾದ ತೊಂದರೆ­­ಗಳ ಕುರಿತು ಅಧ್ಯಯನ ನಡೆಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಪ್ರತಿಕ್ರಿಯೆ ಸಿದ್ಧ­ಪಡಿಸುವ ಕೆಲಸವನ್ನು ಸಂಪುಟ ಉಪ ಸಮಿತಿ ಮಾಡಲಿದೆ ಎಂದು ಜಯಚಂದ್ರ ತಿಳಿಸಿದರು.

ಗಡಿ ನಿಗದಿ ಪರಿಶೀಲನೆ: ದೇಶದ ಎಲ್ಲ ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಜೀವಿ ಧಾಮಗಳಿಗೆ ಪರಿಸರ ಸೂಕ್ಷ್ಮ ವಲಯಗಳ ಗಡಿ ಗುರುತಿಸುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಈ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ರಾಜ್ಯದಲ್ಲಿ ಐದು ರಾಷ್ಟ್ರೀಯ ಉದ್ಯಾನಗಳು ಮತ್ತು 27 ವನ್ಯಜೀವಿ ಧಾಮಗಳಿದ್ದು, ಬಂಡೀ­ಪುರ ರಾಷ್ಟ್ರೀಯ ಉದ್ಯಾನದಲ್ಲಿ ಮಾತ್ರ ಪರಿಸರ ಸೂಕ್ಷ್ಮ ಗಡಿ ಗುರುತಿಸಲಾಗಿದೆ.

‘ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಜೀವಿ ಧಾಮಗಳಿಂದ ಹತ್ತು ಕಿಲೋಮೀಟರ್‌ ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸು­ವಂತೆ ಸುಪ್ರೀಂಕೋರ್ಟ್‌ ಆದೇಶದಲ್ಲಿ ತಿಳಿಸಿದೆ. ಹಾಗೆ ಮಾಡಿದಲ್ಲಿ ರಾಜ್ಯದ ಅನೇಕ ಜನವಸತಿ ಪ್ರದೇಶಗಳಿಗೆ ತೊಂದರೆ ಆಗುತ್ತದೆ. ಆಯಾ ಪ್ರದೇಶದ ಸ್ಥಿತಿಗತಿಗೆ ಅನುಗುಣವಾಗಿ ಗಡಿ ನಿಗದಿ ಮಾಡುವ ಕುರಿತು ಸಂಪುಟ ಉಪ ಸಮಿತಿ ಪರಿಶೀಲನೆ ನಡೆಸಿ, ವರದಿ ನೀಡಲಿದೆ’ ಎಂದು ಮಹದೇವಪ್ರಸಾದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.