ADVERTISEMENT

‘ಪ್ರಾದೇಶಿಕ ಪಕ್ಷಗಳು ಒಗ್ಗೂಡಿದರೆ ಮೋದಿ ಮನೆಗೆ’

​ಪ್ರಜಾವಾಣಿ ವಾರ್ತೆ
Published 8 ಮೇ 2018, 19:30 IST
Last Updated 8 ಮೇ 2018, 19:30 IST
ಬೆಳಗಾವಿಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಪರ ಮಂಗಳವಾರ ನಡೆದ ಪ್ರಚಾರ ಸಭೆಗೆ ಬಂದ ಅಸಾದುದ್ದೀನ್‌ ಓವೈಸಿ ಅವರತ್ತ ನುಗ್ಗಿದ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಪೊಲೀಸರು ತಡೆದರು
ಬೆಳಗಾವಿಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಪರ ಮಂಗಳವಾರ ನಡೆದ ಪ್ರಚಾರ ಸಭೆಗೆ ಬಂದ ಅಸಾದುದ್ದೀನ್‌ ಓವೈಸಿ ಅವರತ್ತ ನುಗ್ಗಿದ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಪೊಲೀಸರು ತಡೆದರು   

ಬೆಳಗಾವಿ: ಪ್ರಾದೇಶಿಕ ಪಕ್ಷಗಳು ಒಗ್ಗೂಡಿದರೆ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ನಿವೃತ್ತಿ ಪಡೆದು ಗುಜರಾತ್‌ಗೆ ಹೋಗುವುದು ಖಚಿತ ಎಂದು ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್) ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಮಂಗಳವಾರ ಇಲ್ಲಿ ಹೇಳಿದರು.

ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್‌ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.‌

ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಪರ್ಯಾಯ ರಾಜಕಾರಣದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದ ಒವೈಸಿ, ಮೋದಿ ಅವರನ್ನು ಸೋಲಿಸಲು ಕಾಂಗ್ರೆಸ್‌ನಿಂದ ಸಾಧ್ಯವಿಲ್ಲ; ಪ್ರಾದೇಶಿಕ ಪಕ್ಷಗಳ ಒಗ್ಗೂಡುವಿಕೆಯಿಂದ ಮಾತ್ರ ಅದು ಸಾಧ್ಯ. ಹೀಗಾಗಿಯೇ ಜೆಡಿಎಸ್‌ಗೆ ಬೆಂಬಲ ನೀಡುತ್ತಿರುವುದಾಗಿ ಹೇಳಿದರು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತ್ಯತೀತತೆ ಬಗ್ಗೆ ಕೇವಲ ಭಾಷಣ ಮಾಡುತ್ತಾರೆ. ಆದರೆ, ಅದನ್ನು ಜಾರಿಗೆ ತಂದಿಲ್ಲ. ಈವರೆಗೆ ಅವರು ಎಷ್ಟು ಮುಸ್ಲಿಮರನ್ನು ಶಾಸಕ, ಸಂಸದರನ್ನಾಗಿ ಮಾಡಿದ್ದಾರೆ ಎನ್ನುವುದಕ್ಕೆ ಉತ್ತರಿಸಲಿ. ಅವರು ಪರಿಶಿಷ್ಟ ಜಾತಿ, ಪಂಗಡದವರು ಹಾಗೂ ಗಿರಿಜನರಿಗೆ ಮೀಸಲಿಟ್ಟಿದ್ದ ಅನುದಾನದಲ್ಲಿ ಶೇ 40ರಷ್ಟನ್ನೂ ಖರ್ಚು ಮಾಡಿಲ್ಲ’ ಎಂದು ಟೀಕಿಸಿದರು.

‘ಕಾಂಗ್ರೆಸ್‌ ಕೈಗೂ ಮುಸ್ಲಿಮರ ರಕ್ತದ ಕಲೆಗಳು ಅಂಟಿವೆ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಸಲ್ಮಾನ್‌ ಖುರ್ಷಿದ್‌ ಅವರೇ ಹೇಳಿದ್ದಾರೆ’ ಎಂದ ಓವೈಸಿ, ‘ಅವರೇಕೆ ಕರ್ನಾಟಕಕ್ಕೆ ಬಂದು ಕಾಂಗ್ರೆಸ್‌ಗೆ ಮತ ಕೇಳುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ದಲಿತರು, ಅಲ್ಪಸಂಖ್ಯಾತರ ಅಭಿವೃದ್ಧಿ ಅಸಾಧ್ಯ. ಈ ಪಕ್ಷಗಳು ಜನರ ಜೀವನ ಹಾಳು ಮಾಡುತ್ತಿವೆ. ಮುಂದೆ ಮನೆಗಳನ್ನೂ ಹಾಳು ಮಾಡುತ್ತವೆ’ ಎಂದು ಟೀಕಾಪ್ರಹಾರ ನಡೆಸಿದರು.

ಅಂಗಡಿ ಬಂದ್‌ ಮಾಡಿ: ‘ಈ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರ ಅಭಿವೃದ್ಧಿ ಬಗ್ಗೆ ಬಿಜೆಪಿ ಯಾವ ಘೋಷಣೆಯನ್ನೂ ಮಾಡಿಲ್ಲ. ಆದರೆ, ಟಿಪ್ಪು ಸುಲ್ತಾನ್‌ ಹೆಸರಲ್ಲಿ ವಿಶ್ವವಿದ್ಯಾಲಯ ಆರಂಭಿಸುವುದಾಗಿ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜಾತ್ಯತೀತತೆಯ ಅಂಗಡಿಯನ್ನು ರಾಹುಲ್‌ ಗಾಂಧಿ, ರಾಷ್ಟ್ರೀಯತೆಯ ಅಂಗಡಿಯನ್ನು ನರೇಂದ್ರ ಮೋದಿ ಕೂಡಲೇ ಬಂದ್‌ ಮಾಡಬೇಕು’ ಎಂದ ಅವರು, ‘ಟಿಪ್ಪು ಜಯಂತಿ ಆಚರಣೆ ಆರಂಭಿಸಿದ್ದಾಗಿ ಸಿದ್ದರಾಮಯ್ಯ ಬೀಗಬೇಕಾಗಿಲ್ಲ; ಜಯಂತಿ ಮಾಡದಿದ್ದರೂ ಆ ಹುಲಿಯ ಹೆಸರು ಅಜರಾಮರವಾಗಿರುತ್ತದೆ’ ಎಂದು ಹೇಳಿದರು.

ಲಘು ಲಾಠಿಪ್ರಹಾರ: ಓವೈಸಿ ಕಾರ್ಯಕ್ರಮಕ್ಕೆ ಬರುವಾಗ ಹಾಗೂ ಹೊರಡುವಾಗ, ಅವರ ಕಾರಿನತ್ತ ನುಗ್ಗಿದ ಅಭಿಮಾನಿಗಳು ಹಾಗೂ ಕಾರ್ಯಕರ್ತರನ್ನು ಚದರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

‘ರೈ ತಾಯ್ಗಂಡ’, ‘ಒವೈಸಿ ಬೇವರ್ಸಿ’

ವಿಜಯಪುರ: ‘ಹಿಂದೂಗಳ ಕಗ್ಗೊಲೆ ನಡೆಸುವುದಾಗಿ ಹೇಳುವ ಅಸಾದುದ್ದೀನ್‌ ಒವೈಸಿ ಎಂಬ ಬೇವರ್ಸಿ ಜೆಡಿಎಸ್‌ ಪರವಾಗಿ, ಹಿಂದುತ್ವ ಟೀಕಿಸುವ ನಟ ಪ್ರಕಾಶ್‌ ರೈ ಎಂಬ ತಾಯ್ಗಂಡ ಕಾಂಗ್ರೆಸ್‌ ಪರ ಪ್ರಚಾರ ಮಾಡುತ್ತಿದ್ದಾರೆ’ ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಜರಿದರು.

ಸಾರವಾಡ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಪ್ರಧಾನಿ ಬರುವುದಕ್ಕೂ ಮುನ್ನ ಅವರು ಮಾತನಾಡಿದರು.

ಸೋನಿಯಾ ಗಾಂಧಿ ಬಗ್ಗೆಯೂ ಅವರು ಮಾತನಾಡಿದರು. ‘ದಿವಾಳಿ, ಸ್ಕ್ರ್ಯಾಪ್‌ ಆಗಿರುವ ಸೋನಿಯಾ ಗಾಂಧಿ ಜಿಲ್ಲೆಗೆ ಬರುತ್ತಿದ್ದಾರೆ. ಅವರೂ ಪ್ರಧಾನಿ ಭಾಷಣ ಕೇಳಲು ಬರುತ್ತಿರಬಹುದು’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.