ಶಿವಮೊಗ್ಗ: ಸಕ್ರೆಬೈಲಿನ ಬಿಡಾರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಆನೆ ಉತ್ಸವ’ದಲ್ಲಿ 11 ಆನೆಗಳು ವಿವಿಧ ಸ್ವರ್ಧೆಗಳಲ್ಲಿ ಭಾಗವಹಿಸಿ ಪ್ರೇಕ್ಷಕರನ್ನು ರಂಜಿಸಿದವು.
ರಾಘವೇಂದ್ರ, ಅರ್ಜುನ, ಗಂಗೆ, ಸೂರ್ಯ, ಭಾಸ್ಕರ, ಹೇಮಾವತಿ, ಆಲೆ, ಸಾಗರ್, ಕಿರಣ, ಭಾನುಮತಿ ಹಾಗೂ ಕುಂತಿ ಸೊಂಡಿಲು ಎತ್ತಿ ಪ್ರೇಕ್ಷಕರಿಗೆ ನಮಸ್ಕರಿಸಿದ ನಂತರ ಸ್ಪರ್ಧೆಗಳು ಆರಂಭವಾದವು.
ಸೂರ್ಯ, ಭಾಸ್ಕರ, ಅರ್ಜುನ, ಆಲೆ, ಕಿರಣ ಸೊಂಡಿಲು ಹಿಡಿದು ನಡೆದವು. ನಂತರ ಕಿವಿ, ದಂತ ಹಿಡಿದು ಮೈದಾನದಲ್ಲಿ ಸಾಗಿದವು. ಸೂರ್ಯ, ಭಾಸ್ಕರ್, ಕಿರಣ, ಹೇಮಾವತಿ ಫುಟ್ಬಾಲ್ ಆಡಿದರೆ, ಕ್ರಿಕೆಟ್ನಲ್ಲಿ ಅರ್ಜುನ, ಆಲೆ, ಕಿರಣ ಸಿಕ್ಸರ್, ಬೌಂಡರಿ ಬಾರಿಸಿದಾಗ ಮಕ್ಕಳು ಕುಣಿದರು. ಬಾಳೆ ಹಣ್ಣು, ಕಬ್ಬು ತಿನ್ನುವ ಸ್ಪರ್ಧೆ ಯಲ್ಲಿ ರಾಘವೇಂದ್ರ ಹೊರತುಪಡಿಸಿ ಉಳಿದ 10 ಆನೆಗಳು ಭಾಗವಹಿಸಿದ್ದವು. ಒಟ್ಟಾರೆ ಸ್ಪರ್ಧೆಗಳಲ್ಲಿ ಭಾಸ್ಕರ ಮೊದಲನೆ ಸ್ಥಾನ, ಅರ್ಜುನ ಎರಡನೆ ಸ್ಥಾನ, ಹೇಮಾವತಿ ಮೂರನೆ ಸ್ಥಾನ, ಕಿರಣ ಸಮಾಧಾನಕರ ಬಹುಮಾನ ಪಡೆದರು.
ವಿದಾಯದ ಕ್ಷಣ: ಮುಂದಿನ ತಿಂಗಳು ಉತ್ತರಪ್ರದೇಶದ ದುದ್ವಾ ರಾಷ್ಟ್ರೀಯ ಉದ್ಯಾನಕ್ಕೆ ಹೊರಡುವ ಅಮೃತಾ, ಅಮೃತಾ ಪುತ್ರಿ ಪಾರ್ವತಿ, ರಾಘವೇಂದ್ರ, ಕಿರಣ ಹಾಗೂ ಭಾಸ್ಕರ ಆನೆಗಳಿಗೆ ಇದು ಕೊನೆಯ ಉತ್ಸವ. ರಾಘವೇಂದ್ರ ಎರಡೂ ಮುಂಗಾಲು ಎತ್ತಿ ವಿದಾಯ ಹೇಳಿದ ತಕ್ಷಣ ನೋಡುಗರ ಕಣ್ಣಾಲಿಗಳು ತೇವಗೊಂಡವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.