ADVERTISEMENT

ಬಂಧನದಿಂದ ತಪ್ಪಿಸಿಕೊಳ್ಳಲು ಸಂಸದ ಸಂಗಣ್ಣ ‘ಪರಾರಿ’ ಯತ್ನ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 14:31 IST
Last Updated 19 ಮಾರ್ಚ್ 2018, 14:31 IST
ಕೊಪ್ಪಳದಲ್ಲಿ ಸೋಮವಾರ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸಂಸದ ಸಂಗಣ್ಣ ಕರಡಿ ಅವರನ್ನು ಕೊನೆಗೂ ಬಂಧಿಸಲಾಯಿತು.
ಕೊಪ್ಪಳದಲ್ಲಿ ಸೋಮವಾರ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸಂಸದ ಸಂಗಣ್ಣ ಕರಡಿ ಅವರನ್ನು ಕೊನೆಗೂ ಬಂಧಿಸಲಾಯಿತು.   

ಕೊಪ್ಪಳ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದವರಿಗೆ ಎರಡನೇ ಬೆಳೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆಯಲು ಯತ್ನಿಸಿರುವ ಸಂಸದ ಸಂಗಣ್ಣ ಪೊಲೀಸ್‌ ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪರಾರಿಯಾಗಲು ಸೋಮವಾರ ಯತ್ನಿಸಿದರು.

ನಗರದಲ್ಲಿ ಬಸವೇಶ್ವರರ ಕಂಚಿನ ಪುತ್ಥಳಿ ಉದ್ಘಾಟನೆ ಮತ್ತು ಯಲಬುರ್ಗಾದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದರು.

ಮುನ್ಸೂಚನೆ ಅರಿತ ಪೊಲೀಸರು ಸಂಸದ ಸಂಗಣ್ಣ ಅವರು ಮನೆಯಿಂದ ಹೊರತೆರಳದಂತೆ ಬೆಳಿಗ್ಗೆಯಿಂದಲೇ ಕಾವಲು ಹಾಕಿದ್ದರು. ಸಂಜೆ ವೇಳೆ ಕಾರ್ಯಕರ್ತರು ಸಂಸದರ ಮನೆ ಮುಂದೆ ಜಮಾಯಿಸಿದರು. ಈ ಸಂದರ್ಭ ತಮ್ಮನ್ನು ಬಂಧಿಸುವುದು ಖಚಿತ ಎಂದರಿತ ಸಂಸದರು ಇದ್ದಕ್ಕಿದ್ದಂತೆಯೇ ಪೊಲೀಸ್‌ ಕಾವಲು ತಪ್ಪಿಸಿ ಓಟಕ್ಕಿತ್ತರು.  ಮನೆಯಿಂದ ಸಮೀಪದಲ್ಲಿರುವ ಜಿಲ್ಲಾ ಆಸ್ಪತ್ರೆ ಆವರಣದ ಸಮೀಪ ಓಡುತ್ತಿದ್ದಂತೆಯೇ ವಾಹನದಲ್ಲಿ ಎದುರಾದ ಪೊಲೀಸರು ಸಂಸದರನ್ನು ತಡೆದು ಬಂಧಿಸಿದರು.

ADVERTISEMENT

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅನೂಪ್‌ ಎ.ಶೆಟ್ಟಿ, ಡಿವೈಎಸ್‌ಪಿ ಎಸ್‌.ಎಂ.ಸಂಧಿಗವಾಡ ಮತ್ತು ತಂಡದವರು ಸಂಸದರ ‘ಬಂಧನ’ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲೆಯ ವಿವಿಧ ಭಾಗಗಳಲ್ಲಿನ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ. 

ಪೊಲೀಸ್‌ ಕಾವಲಿನ ನಡುವೆ ಮಾತನಾಡಿದ ಸಂಸದ ಸಂಗಣ್ಣ, ‘ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೆ ನೀರು ಹರಿಸಬೇಕು. ನೀರು ಬಿಡಲು ಈ ಹಿಂದೆಯೂ ಮನವಿ ಮಾಡಿದ್ದೆವು. ಆದರೆ, ಸರ್ಕಾರ ಅದಕ್ಕೆ ಸ್ಪಂದಿಸಿಲ್ಲ. ಅದಕ್ಕಾಗಿ ಮುಖ್ಯಮಂತ್ರಿಯವರ ಗಮನ ಸೆಳೆಯಲು ಸಿದ್ಧತೆ ನಡೆಸಿದ್ದೆವು. ಆದರೆ, ಪೊಲೀಸರು ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ತುಂಗಭದ್ರಾ ಅಣೆಕಟ್ಟೆ ಆಡಳಿತ ಮಂಡಳಿಯಲ್ಲಿ ಸಾಕಷ್ಟು ಭ್ರಷ್ಟರಿದ್ದಾರೆ. ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲು ಯತ್ನಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.