ADVERTISEMENT

ಬಡಿಗೆಯಿಂದ ಹೊಡೆದಾಟ: ವಿಶಿಷ್ಟ ಆಚರಣೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:30 IST
Last Updated 7 ಅಕ್ಟೋಬರ್ 2011, 19:30 IST

ಸಿರುಗುಪ್ಪ(ಬಳ್ಳಾರಿ ಜಿಲ್ಲೆ): ರಾಜ್ಯದ ಗಡಿಗೆ ಹೊಂದಿರುವ ಆಂಧ್ರಪ್ರದೇಶದ ಹೊಳಗುಂದಿ ಮಂಡಲದ ನೆರಣಕಿ ಗ್ರಾಮದ ಬಳಿಯ  ದೇವರಮಲ್ಲಯ್ಯನ ಗುಡ್ಡದಲ್ಲಿ ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಬೆಳಗಿನ ಜಾವದವರೆಗೆ ನಡೆದ ಕಾರಣಿಕ ಉತ್ಸವದಲ್ಲಿ ಬಡಿಗೆಯೊಂದಿಗೆ ಹೊಡೆದಾಡುವ ವಿಶಿಷ್ಟ ಆಚರಣೆ ನಡೆಯಿತು.

ವಿಜಯ ದಶಮಿಯಂದು ನಡೆವ ದೇವರಗುಡ್ಡದ ಮಾಳಮಲ್ಲೇಶ್ವರ ಸ್ವಾಮಿಯ ಕಾರಣಿಕ ಉತ್ಸವದಲ್ಲಿ ರಾತ್ರಿಯಿಡೀ ಸಾವಿರಾರು ಬಡಿಗೆಗಳ ಸದ್ದು ಕೇಳಿಬಂತಲ್ಲದೆ, ಕಡುವೈರಿಗಳ ನಡುವಿನ ಕಾಳಗವನ್ನು ನೆನಪಿಸಿತು.

ಪೊಲೀಸರೆದುರೇ ಸಾವಿರಾರು ಭಕ್ತರು ಕೈಯಲ್ಲಿ ಬಡಿಗೆ ಹಿಡಿದು ಹಲಗೆ, ತಾಳಕ್ಕೆ ಹೆಜ್ಜೆಹಾಕುತ್ತಾ ಕುಣಿದು ಕುಪ್ಪಳಿಸುವ ವೇಳೆ ಬಡಿಗೆಗಳೊಂದಿಗೆ ಹೊಡೆದಾಡುವ ಪ್ರಸಂಗ ಎಂಥವರ ಎದೆಯನ್ನೂ ಒಂದು ಕ್ಷಣ ಝಲ್ ಎನಿಸದೇ ಇರದು.

ಪಾರಂಪರಿಕವಾಗಿ ನಡೆದು ಬಂದಿರುವ ಗುಡ್ಡದಮಲ್ಲಯ್ಯನ ಕಾರಣಿಕ ಉತ್ಸವದ ವಿಶೇಷವಿದು.ಭವಿಷ್ಯವಾಣಿ: `ಮೂರು... ಆರು... ಆರು... ಮೂರು... ಬಹುಪರಾಕ್~  ಮಾಳಮಲ್ಲೇಶ್ವರ ಸ್ವಾಮಿಯ ಪ್ರಸಕ್ತ ಸಾಲಿನ ಕಾರಣಿಕ ಉತ್ಸವದಲ್ಲಿ ಶುಕ್ರವಾರ ಕೇಳಿಬಂದ ಭವಿಷ್ಯವಾಣಿ.

 ಭಕ್ತ ಸಮೂಹವು ಅದರ ಅರ್ಥವನ್ನು ಹಿರಿಯರ ಬಳಿ ಕೇಳಿದಾಗ, ಮೂರು-ಆರು, ಆರು-ಮೂರರ ಲೆಕ್ಕಾಚಾರ. ರೈತರು ಬೆಳೆದ ಬೆಳೆಗೆ ಆರಂಭದಲ್ಲಿ ಕಡಿಮೆ ಬೆಲೆ ಇದ್ದರೂ ಅಲ್ಪ ಸಮಯದಲ್ಲಿ ಬೆಲೆ ಏರಿಕೆಯಾಗಿ, ಸ್ಥಿರ ಬೆಲೆ ಉಳಿಯುವ ಸಂಭವ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.