ADVERTISEMENT

ಬರ್ಕಣದಲ್ಲಿ ಬ್ಯಾಗ್-ಅಕ್ಕಿ, ಪಾತ್ರೆ ವಶ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ತೀರ್ಥಹಳ್ಳಿ (ಶಿವಮೊಗ್ಗ ಜಿಲ್ಲೆ): ಆಗುಂಬೆ ಸಮೀಪ ಮಲ್ಲಂದೂರಿನ ಬರ್ಕಣ ಫಾಲ್ಸ್ ಬಳಿ ಶುಕ್ರವಾರ ಮಧ್ಯಾಹ್ನ ನಕ್ಸಲರ ಹಾಗೂ ನಕ್ಸಲ್ ನಿಗ್ರಹ ಪಡೆಯ ಪೊಲೀಸರ ನಡುವೆ ಗುಂಡಿನ ಚಕಮಕಿ ಸಂಭವಿಸಿದ ಸ್ಥಳದಲ್ಲಿ ಬ್ಯಾಗ್, ಅಕ್ಕಿ, ಪಾತ್ರೆಗಳು ಸಿಕ್ಕಿವೆ ಎಂದು ಆಗುಂಬೆ ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಶನಿವಾರ ನಕ್ಸಲ್ ನಿಗ್ರಹ ದಳದ ಐಜಿಪಿ ಅಲೋಕ್ ಕುಮಾರ್, ನಕ್ಸಲ್ ನಿಗ್ರಹ ದಳದ ಎಸ್‌ಪಿ ವಾಸುದೇವಮೂರ್ತಿ ಹಾಗೂ ಶಿವಮೊಗ್ಗ ಹೆಚ್ಚುವರಿ ಎಸ್‌ಪಿ ಎಂ.ವಿ. ಪಾವಿನ್ ಭೇಟಿ ನೀಡಿದ್ದರು.

ನಕ್ಸಲರು ಇರುವ ಸ್ಥಳವನ್ನು ಪತ್ತೆಹಚ್ಚಿದ ಪೊಲೀಸರು ಸಮೀಪಿಸುತ್ತಿದ್ದಂತೆ ನಕ್ಸಲರ ತಂಡದಿಂದ ಗುಂಡು ಹಾರಿಸಿದ್ದರಿಂದ ಪ್ರತಿದಾಳಿಯನ್ನು ನಡೆಸಲಾಗಿದೆ. ಇಬ್ಬರು ನಕ್ಸಲರು ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಗೋಚರಿಸಿದ್ದು ಉಳಿದ ಏಳೆಂಟು ಮಂದಿ ದೂರದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯ ನಂತರ ನಕ್ಸಲರು ಪರಾರಿಯಾಗಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ತೀರ್ಥಹಳ್ಳಿ ಡಿವೈಎಸ್‌ಪಿ ಶೇಖರ್, ಇನ್ಸ್‌ಪೆಕ್ಟರ್ ತೀರ್ಥರಾಜ್, ಸಬ್ ಇನ್ಸ್‌ಪೆಕ್ಟರನ್ನು ಒಳಗೊಂಡ ಹತ್ತು ಮಂದಿಯ ತಂಡ ಪಾಲ್ಗೊಂಡಿತ್ತು.

ಬರ್ಕಣದಲ್ಲಿ ಸಂಭವಿಸಿದ ಘಟನೆಯ ಹಿನ್ನೆಲೆಯಲ್ಲಿ ಆಗುಂಬೆ ಭಾಗದ ಕಾಡಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ಹಾಗೂ ವಾಹನಗಳ ತಪಾಸಣೆ ಕಾರ್ಯವನ್ನು ತೀವ್ರಗೊಳಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.