ಬೆಂಗಳೂರು: `ಬರಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಹಮ್ಮಿಕೊಳ್ಳಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಏಕೋ ಕುಂಭಕರ್ಣ ನಿದ್ದೆಗೆ ಜಾರಿದ್ದಾರೆ. ಬೆಂಗಳೂರು ಬಿಟ್ಟು ಕದಲುತ್ತಿಲ್ಲ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪರೋಕ್ಷವಾಗಿ ತಮ್ಮ ಪಕ್ಷದ ಸರ್ಕಾರದ ವಿರುದ್ಧವೇ ಹರಿಹಾಯ್ದರು.
`ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಯಥೇಚ್ಛವಾಗಿ ಮಳೆಯಾಗಿತ್ತು. ಈಗ ರಾಜ್ಯದ 123 ತಾಲ್ಲೂಕುಗಳಲ್ಲಿ ಭೀಕರ ಬರ ಇದೆ. ಈ ಹಿನ್ನೆಲೆಯಲ್ಲಿ ಬುಧವಾರದಿಂದಲೇ ಬರಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡಲು ನಿರ್ಧರಿಸಿದ್ದೇನೆ~ ಎಂದು ಅವರು ರೇಸ್ಕೋರ್ಸ್ ರಸ್ತೆಯ ತಮ್ಮ ನಿವಾಸದಲ್ಲಿ ಮಂಗಳವಾರ ತುರ್ತಾಗಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ವಿರುದ್ಧವೂ ಅವರು ಹರಿಹಾಯ್ದರು. `ಮುಖ್ಯ ಕಾರ್ಯದರ್ಶಿಯವರು ಮನೆಯಲ್ಲಿ ಕುಳಿತು ವಿಡಿಯೊ ಸಂವಾದ ಮಾಡುವುದರಿಂದ ಯಾವ ಸಮಸ್ಯೆಯೂ ಬಗೆಹರಿಯುವುದಿಲ್ಲ. ಅವರೂ ಎಲ್ಲೆಡೆ ಪ್ರವಾಸ ಮಾಡಬೇಕು~ ಎಂದು ಹೇಳಿದರು.
`ಕೆಲ ಅಧಿಕಾರಿಗಳು ಜಿಲ್ಲಾ ಕೇಂದ್ರಗಳಿಗೆ ರೈಲಿನಲ್ಲಿ ಹೋಗಿ ಪುನಃ ರೈಲಿನಲ್ಲೇ ವಾಪಸಾಗುತ್ತಾರೆ. ಅವರಿಗೆ ಬೆಂಗಳೂರಿನ ತಂಪೇ ಇಷ್ಟ. ಈ ಧೋರಣೆ ಸರಿ ಅಲ್ಲ. ಅಧಿಕಾರಿಗಳು ಹಳ್ಳಿಗೆ ಹೋಗಿ ಪರಿಸ್ಥಿತಿ ಅಧ್ಯಯನ ಮಾಡುವ ಅಭ್ಯಾಸವನ್ನೇ ಮರೆತಿದ್ದಾರೆ~ ಎಂದು ಗುಡುಗಿದರು.
ಹಾಗಾದರೆ ಬರ ನಿರ್ವಹಣೆಯಲ್ಲಿ ಸದಾನಂದ ಗೌಡ ನೇತೃತ್ವದ ಸರ್ಕಾರ ವಿಫಲವಾಗಿದೆಯೇ ಎಂದು ಸುದ್ದಿಗಾರರು ಕೇಳಿದ್ದಕ್ಕೆ, `ನಾನು ಹಾಗೆ ಹೇಳಿಲ್ಲ. ಸರ್ಕಾರ ಇತ್ತೀಚೆಗೆ ವಿಧಾನಮಂಡಲದಲ್ಲಿ ಬರ ನಿರ್ವಹಣೆಗೆ ಏನೆಲ್ಲ ಕ್ರಮ ತೆಗೆದುಕೊಂಡಿದೆ ಎಂಬುದನ್ನು ಹೇಳಿದೆ. ಅದರ ಹೊರತಾಗಿಯೂ ಅಧಿಕಾರಿಗಳು ಇನ್ನೂ ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು. ನನ್ನ ಆರೋಪ ಸರ್ಕಾರದ ವಿರುದ್ಧ ಅಲ್ಲ. ಸರ್ಕಾರ ಉತ್ತಮ ಕೆಲಸ ಮಾಡಿದೆ~ ಎಂದು ಉತ್ತರಿಸಿದರು.
ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ ನಂತರ ಅಧಿಕೃತವಾಗಿ ಕರೆದ ಮೊದಲ ಪತ್ರಿಕಾಗೋಷ್ಠಿ ಎಂದು ಹೇಳಿಕೊಂಡ ಯಡಿಯೂರಪ್ಪ, `ಇಷ್ಟೂ ದಿನ ಮೌನವಾಗಿದ್ದೆ. ಇನ್ನು ಹಾಗೆ ಇರಲು ಸಾಧ್ಯ ಇಲ್ಲ ಎಂಬ ಕಾರಣಕ್ಕೆ ಮೌನ ಮುರಿದಿದ್ದೇನೆ~ ಎಂದರು.
`ಬರಪೀಡಿತ ಪ್ರದೇಶಗಳ ಜನಪ್ರತಿನಿಧಿಗಳು ಹಾಗೂ ಪಕ್ಷದ ಕಾರ್ಯಕರ್ತರು ತಮ್ಮ ಜಿಲ್ಲೆಗಳಿಗೆ ಭೇಟಿ ನೀಡಬೇಕು ಎಂದು ಒತ್ತಡ ಹಾಕಿದ್ದಾರೆ. ಹೀಗಾಗಿ ಬುಧವಾರದಿಂದ ಕೊಪ್ಪಳ, ಗದಗ, ವಿಜಾಪುರ, ರಾಯಚೂರು, ಯಾದಗಿರಿ, ಬೀದರ್ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೇನೆ. ಇದೇ 8ರವರೆಗೂ ಈ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯುತ್ತೇನೆ. ಗೋಶಾಲೆಗಳು ಹೇಗೆ ನಡೆಯುತ್ತಿವೆ? ಗಂಜಿ ಕೇಂದ್ರಗಳ ಪರಿಸ್ಥಿತಿ ಹೇಗಿದೆ? ಕುಡಿಯುವ ನೀರಿನ ಸಮಸ್ಯೆ... ಹೀಗೆ ಎಲ್ಲವನ್ನೂ ಪರಿಶೀಲಿಸುತ್ತೇನೆ. ಅದನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರುತ್ತೇನೆ~ ಎಂದು ಹೇಳಿದರು.
`ಬರಪೀಡಿತ ಪ್ರತಿ ಜಿಲ್ಲೆಗೂ ತಲಾ ಐದು ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು. ಬರ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಹಮ್ಮಿಕೊಳ್ಳಬೇಕು. ಅಗತ್ಯ ಇರುವ ಕಡೆ ಗಂಜಿ ಕೇಂದ್ರ ಮತ್ತು ಗೋಶಾಲೆಗಳನ್ನು ಸ್ಥಾಪಿಸಬೇಕು. ಮೇವಿನ ಸಮಸ್ಯೆ ನೀಗಿಸಬೇಕು~ ಎಂದು ಮುಖ್ಯಮಂತ್ರಿ ಅವರನ್ನು ಆಗ್ರಹಿಸಿದರು.
ತಾವು, ತಮ್ಮ ಬೆಂಬಲಿಗ ಸಚಿವರು ಮತ್ತು ಶಾಸಕರ ಜತೆ ರೆಸಾರ್ಟ್ನಲ್ಲಿದ್ದಾಗ ಬರ ಪರಿಸ್ಥಿತಿ ನೆನಪಾಗಲಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ಯಡಿಯೂರಪ್ಪ ಅವರು `ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ~ ಎಂದರು.
ಅಭಿನಂದನೆ ಸದ್ಯಕ್ಕೆ ಇಲ್ಲ: `ನನ್ನನ್ನು ಅಭಿನಂದಿಸಬೇಕು ಎಂದು ರಾಜ್ಯದ ನಾಲ್ಕೈದು ಜಿಲ್ಲೆಗಳಿಂದ ಮನವಿಗಳು ಬಂದಿವೆ. ಆದರೆ, ಸದ್ಯಕ್ಕೆ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಈಗ ಏನಿದ್ದರೂ ಬರ ನಿರ್ವಹಣೆ ಕಡೆಗೆ ಗಮನ ನೀಡುತ್ತೇನೆ. ಬರಗಾಲದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತೇನೆ. ಈ ಭೇಟಿ ಸಂದರ್ಭದಲ್ಲೂ ಜನರಿಂದ ಸನ್ಮಾನ ಸ್ವೀಕರಿಸುವುದಿಲ್ಲ~ ಎಂದು ಹೇಳಿದರು.
ಬರಗಾಲದಲ್ಲಿ ಸನ್ಮಾನ ಬೇಡ ಎಂದು ಸದಾನಂದ ಗೌಡರು ಹೇಳಿದ್ದಾರೆ. ಅದರ ಪರಿಣಾಮವೇ ಈ ನಿರ್ಧಾರ ಎಂದು ಕೇಳಿದ್ದಕ್ಕೆ, `ಗೌರವಾನ್ವಿತ ಮುಖ್ಯಮಂತ್ರಿಯವರ ಹೇಳಿಕೆ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ~ ಎಂದರು. ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮುಖಂಡರಾದ ಲಕ್ಷ್ಮೀನಾರಾಯಣ, ಬಿ.ಜೆ.ಪುಟ್ಟಸ್ವಾಮಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.