ಬಸವಕಲ್ಯಾಣದಲ್ಲಿ ದಿಢೀರ್ ಬಂದ್
ಬಸವಣ್ಣನ ಮೂರ್ತಿ ಭಗ್ನಕ್ಕೆ ತೀವ್ರ ಆಕ್ರೋಶ
ಪ್ರಜಾವಾಣಿ ವಾರ್ತೆ Published 20 ಡಿಸೆಂಬರ್ 2012, 19:59 IST Last Updated 20 ಡಿಸೆಂಬರ್ 2012, 19:59 IST ಬಸವಕಲ್ಯಾಣ (ಬೀದರ್ ಜಿಲ್ಲೆ): ಇಲ್ಲಿಗೆ ಸಮೀಪದ ರಾಜೇಶ್ವರದಲ್ಲಿ ಸಿಮೆಂಟ್ನಿಂದ ನಿರ್ಮಿಸಿದ ಬಸವಣ್ಣನವರ ಅಶ್ವಾರೂಢ ಪ್ರತಿಮೆಯನ್ನು ಕಟ್ಟೆಯಿಂದ ಕೆಳಗೆ ಬೀಳಿಸಿ ಭಗ್ನಗೊಳಿಸಿದ ಘಟನೆ ನಡೆದಿದೆ.
ಘಟನೆಯನ್ನು ಖಂಡಿಸಿ ಗ್ರಾಮಸ್ಥರು ಗುರುವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ತಾಲ್ಲೂಕು ಕೇಂದ್ರ ಬಸವಕಲ್ಯಾಣದಲ್ಲೂ ದಿಢೀರ್ ಬಂದ್ ಆಚರಿಸಿ, ಈ ಕೃತ್ಯ ನಡೆಸಿದವರನ್ನು ಬಂಧಿಸಲು ಒತ್ತಾಯಿಸಲಾಯಿತು.
ಶಾಸಕ ರಾಜಶೇಖರ ಪಾಟೀಲ ಹುಮನಾಬಾದ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತ್ಯಾಗರಾಜನ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದರು. ಅವರು ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟಿದ್ದರಿಂದ ಪ್ರತಿಭಟನೆ ಅಂತ್ಯಗೊಂಡಿತು. ಹೊಸ ಮೂರ್ತಿ ಪ್ರತಿಷ್ಠಾಪಿಸುವುದಕ್ಕಾಗಿ ಬೇರೆಡೆ ಕಟ್ಟೆ ನಿರ್ಮಿಸುವ ಕಾಮಗಾರಿಗೆ ಮಠಾಧೀಶ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಧ್ಯಾಹ್ನ ಶಂಕುಸ್ಥಾಪನೆ ನೆರವೇರಿಸಿದರು.