ಪುತ್ತೂರು: ಸಾಹಿತ್ಯ ಲೋಕದ ‘ಶಬ್ದ ಬ್ರಹ್ಮ’ ಡಾ.ಶಿವರಾಮ ಕಾರಂತರ ಕರ್ಮಭೂಮಿಯಾಗಿದ್ದ ಪುತ್ತೂರು ಬಾಲವನವನ್ನು, ಕವಿ ಗೋವಿಂದ ಪೈ, ಕುವೆಂಪು ಸ್ಮಾರಕಗಳಂತೆ ರಾಷ್ಟ್ರೀಯ ಸ್ಮಾರಕವಾಗಿ ಅಭಿವೃದ್ಧಿಪಡಿಸುವ ಮೂಲಕ ಕಾರಂತರಿಗೆ ಗೌರವ ಅರ್ಪಣೆ ಮಾಡುವ ಕೆಲಸ ನಡೆಯಬೇಕು ಎಂದು ಸಂಸದ ವೀರಪ್ಪ ಮೊಯಿಲಿ ಹೇಳಿದರು.
ಪುತ್ತೂರಿನ ಪರ್ಲಡ್ಕದಲ್ಲಿರುವ ಬಾಲವನದಲ್ಲಿ ಮಂಗಳವಾರ ಡಾ.ಶಿವರಾಮ ಕಾರಂತರ 115ನೇ ಜನ್ಮದಿನಾಚರಣೆ ಕಾರ್ಯಕ್ರಮ, ಪುನಶ್ಚೇತನ
ಗೊಂಡ ಕಾರಂತರ ಮನೆ, ಮ್ಯೂಸಿಯಂ ಹಾಗೂ ಗ್ರಂಥಾಲಯ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಬಾಲವನ ಕಾರಂತರ ತಪೋವನ. ಯಕ್ಷಗಾನವನ್ನು ಬ್ಯಾಲೆಯನ್ನು ವರ್ತಮಾನದ ಬೆಳಕಿನಲ್ಲಿ ಜಗತ್ತಿಗೆ ನೀಡಿದ ಈ ಬಾಲವನದಲ್ಲಿ, ಯಕ್ಷಗಾನ ಸಂಶೋಧನಾ ಕೇಂದ್ರ ನಿರ್ಮಾಣವಾಗಬೇಕು. ಕಾರಂತರಿಂದ ಬಾಲವನದಲ್ಲಿ ಸುಮಾರು 40 ಕೃತಿಗಳು ಹುಟ್ಟು ಪಡೆದಿವೆ. ಕಾರಂತರ ಕಾದಂಬರಿಗಳು ಸತ್ಯದ ಶಿಲಾಶಾಸನಗಳಾಗಿದ್ದು, ಗದ್ಯ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ’ ಎಂದು ಹೇಳಿದರು.
ಕಾರಂತರ ಪುತ್ರಿ, ಒಡಿಸ್ಸಿ ನೃತ್ಯ ಕಲಾವಿದೆ ಕ್ಷಮಾ ರಾವ್ ಮಾತನಾಡಿ, ‘ಕಾರಂತರ ಮೂಲ ದೃಷ್ಟಿಕೋನವನ್ನು ಇಟ್ಟುಕೊಂಡು ಅಭಿವೃದ್ಧಿ ಕೆಲಸ ನಡೆಯಬೇಕು. ಬಾಲವನದಲ್ಲಿ ಪ್ರಕೃತಿ ಪಾಠ ಶಾಲೆ ಕಾರಂತರ ಕನಸಾಗಿತ್ತು. ಇಲ್ಲಿನ ಪ್ರಕೃತಿಯನ್ನು ಕಾರಂತ ಜೈವಿಕ ವನವಾಗಿ ನಿರ್ಮಿಸಬೇಕು. ಕಾರಂತರ ವಿವಿಧ ಚಿತ್ರಗಳ ಗ್ಯಾಲರಿ ನಿರ್ಮಿಸಿ, ಅದಕ್ಕೆ ‘ಹುಚ್ಚು ಮನಸ್ಸಿನ ಹತ್ತು ಮುಖ’ಎಂಬ ಹೆಸರಿಡಬೇಕು. ಯಾವುದೇ ಸಂದರ್ಭದಲ್ಲಿಯೂ ಕಾರಂತರ ಮೂಲ ಆಶಯಗಳಿಗೆಧಕ್ಕೆಯಾಗಬಾರದು’ ಎಂದರು.
ಬಾಲವನ ಪ್ರಶಸ್ತಿ
ಮಂಗಳವಾರ ಸಂಜೆ ನಡೆದ ಸಮಾರಂಭದಲ್ಲಿ ಹಿರಿಯ ಸಾಹಿತಿ ವೈದೇಹಿ ಅವರಿಗೆ ‘ಬಾಲವನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅದಕ್ಕೆ ಮೊದಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕಾರಂತರನ್ನು ಸ್ಮರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.