ADVERTISEMENT

ಬಿಜೆಪಿ ಸೇರಲ್ಲ: ಲಖನ್

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 19:30 IST
Last Updated 4 ಏಪ್ರಿಲ್ 2018, 19:30 IST

ಗೋಕಾಕ (ಬೆಳಗಾವಿ ಜಿಲ್ಲೆ): ‘ಮುಖ್ಯಮಂತ್ರಿ ಸ್ಥಾನ ಕೊಡುತ್ತೇನೆಂದರೂ ನಾನು ಬಿಜೆಪಿ ಸೇರಲಾರೆ’ ಎಂದು ಕಾಂಗ್ರೆಸ್ ಮುಖಂಡ ಲಖನ್‌ ಜಾರಕಿಹೊಳಿ ಬುಧವಾರ ಇಲ್ಲಿ ಹೇಳಿದರು.

ಯಮಕನಮರಡಿ ಕ್ಷೇತ್ರದಿಂದ, ಅಣ್ಣ ಸತೀಶ ಜಾರಕಿಹೊಳಿ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸುವುದಾಗಿ ಅವರು ಇತ್ತೀಚೆಗೆ ಹೇಳಿದ್ದರು. ಆದರೆ, ಈಗ ಕಾಂಗ್ರೆಸ್‌ನಲ್ಲೇ ಇದ್ದು, ಸಚಿವ ರಮೇಶ ಜಾರಕಿಹೊಳಿ ಗೆಲುವಿಗೆ ಶ್ರಮಿಸುವುದಾಗಿ ಘೋಷಿಸಿದರು. ಈ ಮೂಲಕ ಸೋದರರ ನಡುವಿನ ‘ಶೀತಲ ಸಮರ’ ತಣ್ಣಗಾದಂತಾಗಿದೆ.

ನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಲಖನ್‌, ‘ಯಾವುದೇ ಕಾರಣಕ್ಕೂ ನಾನು ಬಿಜೆಪಿ ಸೇರುವುದಿಲ್ಲ. ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗದೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು’ ಎಂದು ಹೇಳಿದರು.

ADVERTISEMENT

‘ಪಕ್ಷ ತೊರೆಯುವ ನಿರ್ಧಾರವನ್ನು ಅಣ್ಣ ರಮೇಶ ಜಾರಕಿಹೊಳಿ ಅವರ ಸಲಹೆ ಮೇರೆಗೆ ಕೈಬಿಟ್ಟಿದ್ದೇನೆ. ನಮ್ಮ ತಂದೆ– ತಾಯಿ ಕಟ್ಟಿದ್ದ ಸಾಮ್ರಾಜ್ಯದಲ್ಲಿ ನಾವು (ಸಹೋದರರು) ರಾಜ್ಯಭಾರ ಮಾಡುತ್ತಿದ್ದೇವೆ. ಜನರ ಆಶೀರ್ವಾದ ಪಡೆದು ಆಡಳಿತ ನಡೆಸುತ್ತಿದ್ದೇವೆ. ತಾಲ್ಲೂಕಿನ ಜನರು ನಮ್ಮ ಕುಟುಂಬದ ಮೇಲೆ ಇಟ್ಟ ಪ್ರೀತಿ, ವಿಶ್ವಾಸವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಈ ಸಲವೂ ಗೋಕಾಕದಿಂದ ಸ್ಪರ್ಧಿಸಿರುವ ರಮೇಶ ಅವರನ್ನು ಗೆಲ್ಲಿಸಿ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.