ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನಲ್ಲಿರುವ ಭರಚುಕ್ಕಿ ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ನಿತ್ಯವೂ ಪ್ರವಾಸಿಗರು ಜಲಪಾತದ ಸೊಬಗು ನೋಡಲು ದಾಂಗುಡಿ ಇಡುತ್ತಿದ್ದಾರೆ. ರಜಾದಿನಗಳಂದು ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಈಗ ಉತ್ತಮವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ, ಜಲಾನಯನ ಪ್ರದೇಶದಲ್ಲಿರುವ ಜಲಾಶಯಗಳಿಂದ ನೀರಿನ ಹೊರಹರಿವು ಪ್ರಮಾಣ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಭರಚುಕ್ಕಿ ಜಲಪಾತಕ್ಕೆ ಜೀವಕಳೆ ಬಂದಿದೆ.
ಕೇಂದ್ರ ಸರ್ಕಾರ, ಭರಚುಕ್ಕಿ ಜಲಪಾತದ ಅಭಿವೃದ್ಧಿಗೆ ರೂ 4.30 ಕೋಟಿ ಮೀಸಲಿಟ್ಟಿದೆ. ಇದರಲ್ಲಿ ರೂ 1.50 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ಅನುದಾನದ ಅಡಿ ವೀಕ್ಷಣಾ ಗೋಪುರ, ಮೆಟ್ಟಿಲು, ಅತಿಥಿಗೃಹ ಹಾಗೂ ಶೌಚಾಲಯ ನಿರ್ಮಿಸಲಾಗಿದೆ.
2007ರ ಡಿಸೆಂಬರ್ 8ರಂದು ಪ್ರಥಮ ಬಾರಿಗೆ ಭರಚುಕ್ಕಿ ಜಲಪಾತೋತ್ಸವ ನಡೆದಿತ್ತು. ಈ ಬಾರಿಯೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಡಿ ಮತ್ತೆ ಜಲಪಾತೋತ್ಸವ ನಡೆಸಲು ಜಿಲ್ಲಾಡಳಿತದಿಂದ ಭರದ ಸಿದ್ಧತೆ ನಡೆದಿದೆ.
`ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್, `ಭರಚುಕ್ಕಿ ಜಲಪಾತೋತ್ಸವ' ಹಮ್ಮಿಕೊಳ್ಳುವ ಬಗ್ಗೆ ಸೂಚನೆ ನೀಡಿದ್ದಾರೆ. ಹೀಗಾಗಿ, ಬರುವ ಆಗಸ್ಟ್ನಲ್ಲಿ ಎರಡು ದಿನ `ಜಲಪಾತೋತ್ಸವ' ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಗಿದೆ.
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಹೀಗಾಗಿ, ಕಾರ್ಯಕ್ರಮ ನಡೆಯುವ ವೇಳೆ ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆ ಕಡಿಮೆಯಾದರೂ ಚಿಂತಿಸುವ ಅಗತ್ಯವಿಲ್ಲ.
ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಅಂತಿಮ ದಿನಾಂಕ ನಿಗದಿಪಡಿಸಲಾಗುವುದು' ಎಂದು ಭರಚುಕ್ಕಿ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಉಪ ವಿಭಾಗಾಧಿಕಾರಿ ಎಚ್.ಎಸ್. ಸತೀಶ್ಬಾಬು `ಪ್ರಜಾವಾಣಿ'ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.