ADVERTISEMENT

ಭೀಕರ ಅಪಘಾತ: ನಾಲ್ವರು ವಿದ್ಯಾರ್ಥಿಗಳ ಸಾವು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST
ಭೀಕರ ಅಪಘಾತ: ನಾಲ್ವರು ವಿದ್ಯಾರ್ಥಿಗಳ ಸಾವು
ಭೀಕರ ಅಪಘಾತ: ನಾಲ್ವರು ವಿದ್ಯಾರ್ಥಿಗಳ ಸಾವು   

ರಾಮನಗರ: ತಾಲ್ಲೂಕಿನ ಕೆಂಪನಹಳ್ಳಿ ಗೇಟ್ ಬಳಿ ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಕಾರ್ ಹಾಗೂ ಟ್ರಕ್ ನಡುವೆ ಶುಕ್ರವಾರ ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಕೇರಳ ಮೂಲದ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟದ್ದಾರೆ.

ಜೋಯಲ್‌ ಜಾಕೊಬ್, ನಿಖಿತ್ ಸುದೀಪ್, ಝೀನಾ ಯಲ್ಡೊ ಮತ್ತು ರುಬೇಕಾ ಮೃತರು. ಎಲ್ಲರೂ 20–21ರ ವಯೋಮಾನದವರು. ಇವರ ಪೈಕಿ ಜಾಕೊಬ್‌ ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು. ನಿಖಿತ್‌ ಸಿ.ಎ. ಕೋರ್ಸ್‌ ಓದುತ್ತಿದ್ದರು. ಉಳಿದ ಇಬ್ಬರು ತಮಿಳುನಾಡಿನ ವೆಲ್ಲೂರಿನ ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಬಿ.ಇ. ವಿದ್ಯಾರ್ಥಿನಿಯರು.

ಬೆಳಿಗ್ಗೆ 3.30ರ ಸುಮಾರಿಗೆ ಇವರೆಲ್ಲರೂ ಕಾರಿನಲ್ಲಿ ಬೆಂಗಳೂರಿನ ಕಡೆಗೆ ಹೊರಟಿದ್ದ ಸಂದರ್ಭ ಕಾರ್‌ ರಸ್ತೆ ವಿಭಜಕವನ್ನು ದಾಟಿ ಮತ್ತೊಂದು ಬದಿಗೆ ಚಲಿಸಿತು. ಆಗ ಮುಂಭಾಗದಿಂದ ಬರುತ್ತಿದ್ದ ಟ್ರಕ್ ನಡುವೆ ಡಿಕ್ಕಿ ಸಂಭವಿಸಿತು. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಒಳಗಿದ್ದ ನಾಲ್ವರೂ ಸ್ಥಳದಲ್ಲಿಯೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್ ಸ್ಥಳಕ್ಕೆ ಭೇಟಿ ನೀಡಿದ್ದರು. ರಾಮನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.