
ಕೋಲಾರ: ‘ಪೂರ್ವಜರಿಂದ ಬಂದಿರುವ ಅಲ್ಪ ಸ್ವಲ್ಪ ಕೃಷಿ ಭೂಮಿಯನ್ನು ರಸ್ತೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದರೆ ನಾವು ಜೀವನ ನಡೆಸುವುದು ಹೇಗೆ’ ಎಂದು ಬೆಂಗಳೂರು– ಚೆನ್ನೈ ಎಕ್ಸ್ಪ್ರೆಸ್ ಕಾರಿಡಾರ್ ಯೋಜನೆ ವ್ಯಾಪ್ತಿಯ ರೈತರು ಅಳಲು ತೋಡಿಕೊಂಡರು.
ಬೆಂಗಳೂರು– ಚೆನ್ನೈ ಎಕ್ಸ್ಪ್ರೆಸ್ ಕಾರಿಡಾರ್ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ರೈತರ ಬೇಡಿಕೆಗಳು ಹಾಗೂ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಉದ್ದೇಶಕ್ಕಾಗಿ ನಗರದಲ್ಲಿ ಬುಧವಾರ ಜನಪ್ರತಿನಿಧಿಗಳೊಂದಿಗೆ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ರೈತರು, ಯೋಜನೆಯಿಂದಾಗುವ ಸಮಸ್ಯೆ ಹಾಗೂ ಕಷ್ಟಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಜಿ.ಸಿ,ಬಯ್ಯಾರೆಡ್ಡಿ ಮಾತನಾಡಿ, ‘ಕೇಂದ್ರ ಸರ್ಕಾರ ಬೆಂಗಳೂರು– ಚೆನ್ನೈ ಎಕ್ಸ್ಪ್ರೆಸ್ ಹೆದ್ದಾರಿ ನಿರ್ಮಾಣಕ್ಕಾಗಿ ಜಿಲ್ಲೆಯಲ್ಲಿ 2 ಸಾವಿರ ಎಕರೆ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಆದರೆ, ಈ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡದೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಂತಿಮ ಅಧಿಸೂಚನೆ ಹೊರಡಿಸಿರುವುದು ನ್ಯಾಯಸಮ್ಮತವಲ್ಲ’ ಎಂದು ಕಿಡಿಕಾರಿದರು.
2013ರ ಭೂಸ್ವಾಧೀನ ಕಾಯ್ದೆಯಂತೆ ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ನೀಡಬೇಕು. ಅದರಲ್ಲೂ ಪ್ರಮುಖವಾಗಿ ಜಮೀನಿನ ಮಾರುಕಟ್ಟೆ ದರ ಹಾಗೂ ಮಾರ್ಗಸೂಚಿ ದರದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಹೊಸಕೋಟೆ ಬಳಿಯ ಕೊಳತ್ತೂರು ಬಳಿ ಎಕರೆಗೆ ₹ 1.10 ಕೋಟಿ ಮಾರ್ಗಸೂಚಿ ದರ ನಿಗದಿಯಾಗಿದ್ದರೆ, ಜಿಲ್ಲೆಯ ಕೆಜಿಎಫ್ನ ಕದರಿಗಾನಕುಪ್ಪ ಸಮೀಪ ಎಕರೆಗೆ ಕೇವಲ ₹ 1.40 ಲಕ್ಷ ಮಾರ್ಗಸೂಚಿ ದರ ನಿಗದಿಪಡಿಸಲಾಗಿದೆ. ಇದರಿಂದ ರೈತರಿಗೆ ಭಾರಿ ಅನ್ಯಾಯವಾಗುತ್ತದೆ ಎಂದು ದೂರಿದರು.
ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ 22 ಹಳ್ಳಿ, ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ 17, ಕೆಜಿಎಫ್ನ 18, ಕೋಲಾರ 2 ಮತ್ತು ಮುಳಬಾಗಿಲು ಕ್ಷೇತ್ರದ 2 ಹಳ್ಳಿಗಳ ರೈತರ ಜಮೀನುಗಳನ್ನು ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಆದರೂ ಈ ಭಾಗದ ರೈತರಿಗೆ ಅಧಿಕಾರಿಗಳು ಯೋಜನೆ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊಸದಾಗಿ ನಿರ್ಮಾಣವಾಗುವ ಹೆದ್ದಾರಿಗೆ ಜಮೀನು ಕೊಡುವ ರೈತರಿಂದ ಟೋಲ್ ವಸೂಲಿ ಮಾಡಬಾರದು. ಜತೆಗೆ ರೈತರ ಮಕ್ಕಳಿಗೆ ಉದ್ಯೋಗ ನೀಡಬೇಕು. ಭೂಪರಿಹಾರ ದರವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಭಿಕ್ಷೆ ಬೇಡುತ್ತಿಲ್ಲ: ರೈತರ ಸಮಸ್ಯೆ ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್ಕುಮಾರ್, ‘ರೈತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಅನ್ಯಾಯ ಆಗಬಾರದು ಉದ್ದೇಶಿತ ಹೆದ್ದಾರಿಯಿಂದ 2 ಕಿ.ಮೀ ಅಂತರದಲ್ಲಿರುವ ಜಮೀನುಗಳಿಗೆ ಬೇರೆ ಬೇರೆ ರೀತಿಯಲ್ಲಿ ಪರಿಹಾರ ಸಿಗುತ್ತದೆ ಎಂದರೆ ಸಹಿಸಲು ಸಾಧ್ಯವಿಲ್ಲ’ ಎಂದರು.
ಯೋಜನೆಗೆ ಭೂಮಿ ನೀಡುವ ರೈತರು ಹೆಚ್ಚಿನ ಪರಿಹಾರ ಕೇಳುವುದು ತಪ್ಪಲ್ಲ. ರೈತರು ಭಿಕ್ಷೆ ಬೇಡುತ್ತಿಲ್ಲ. ಪರಿಹಾರ ಕೇಳುವುದು ಅವರ ಹಕ್ಕು. ರೈತರಿಗೆ ನ್ಯಾಯ ಕೊಡದೆ ದೇಶದ ಅಭಿವೃದ್ದಿ ಸಾಧ್ಯವಿಲ್ಲ ಎಂದರು.
ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ದುಡುಕು ನಿರ್ಧಾರ ತೆಗೆದುಕೊಳ್ಳಬಾರದು. ರೈತರ ಎಲ್ಲಾ ಸಮಸ್ಯೆಗಳನ್ನು ಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಸಚಿವರ ಗಮನಕ್ಕೆ ತರುತ್ತೇನೆ. ಕೇಂದ್ರ ಸಚಿವರ ಜತೆಯು ಚರ್ಚೆ ನಡೆಸಲು ಸಿದ್ಧ ಎಂದು ಭರವಸೆ ನೀಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ಯಶೋಧಾ, ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಇತರರಿದ್ದರು.
ಕುಟುಂಬ ಸಮೇತ ಆತ್ಮಹತ್ಯೆ
‘ನನಗೆ 4 ಎಕರೆ ಜಮೀನಿದೆ. ಅದರಲ್ಲಿ 2 ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿದೆ. ಈ ಜಮೀನಿನಲ್ಲೇ ರೇಷ್ಮೆ ಮತ್ತು ಪಪ್ಪಾಯ ಬೆಳೆದು ಮಕ್ಕಳನ್ನು ಓದಿಸುತ್ತಿದ್ದೇನೆ. ಸರ್ಕಾರ ರಸ್ತೆ ನಿರ್ಮಾಣಕ್ಕಾಗಿ ಜಮೀನು ಸ್ವಾಧೀನಪಡಿಸಿಕೊಂಡರೆ ಜೀವನ ನಡೆಸುವುದು ಹೇಗೆ. ಮಕ್ಕಳ ಶೈಕ್ಷಣಿಕ ವೆಚ್ಚಕ್ಕೆ ಏನು ಮಾಡಲಿ. ಕುಟುಂಬ ಸಮೇತ ಜಿಲ್ಲಾಧಿಕಾರಿ ಕಚೇರಿ ಎದುರು ಆತ್ಮಹತ್ಯೆ ಮಾಡಿಕೊಳ್ಳುವುದೇ ನಮಗಿರುವ ಏಕೈಕ ಮಾರ್ಗ’ ಎಂದು ರೈತಮುನಿಯಪ್ಪ ಕಣ್ಣೀರಿಟ್ಟರು.
ಮಾಲೂರು ಶಾಸಕಕೆ.ಎಸ್.ಮಂಜುನಾಥಗೌಡ ಮಾತನಾಡಿ, ‘ಹೆದ್ದಾರಿ ಯೋಜನೆಗೆ ಜಮೀನು ನೀಡುವ ರೈತರಿಗೆ ಸೂಕ್ತ ಪರಿಹಾರ ಕೊಡದಿದ್ದರೆ ರೈತರು ಬೀದಿಗಿಳಿದು ಹೋರಾಟ ಮಾಡುತ್ತಾರೆ. ಮಾರುಕಟ್ಟೆ ದರ ಮತ್ತು ಮಾರ್ಗಸೂಚಿ ದರದ ನಡುವಿನ ವ್ಯತ್ಯಾಸ ಸರಿಪಡಿಸಬೇಕು. ಇಲ್ಲದಿದ್ದರೆ ರೈತರಿಗೆ ತುಂಬಾ ಅನ್ಯಾಯವಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.